ಲಕ್ನೋ: ಉತ್ತರ ಪ್ರದೇಶದ ಅಲಿಘರ್ನಲ್ಲಿರುವ ತಮ್ಮ ನಿವಾಸದಲ್ಲಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಕ್ಕಾಗಿ ಬಿಜೆಪಿ ನಾಯಕಿ ರೂಬಿ ಆಸಿಫ್ ಖಾನ್ ವಿರುದ್ಧ ಕೊಲೆ ಬೆದರಿಕೆ ಮತ್ತು ಫತ್ವಾ ಹೊರಡಿಸಲಾಗಿದೆ.
ರೂಬಿ ಅವರು ಇಬ್ಬರು ಸಹೋದರಿಯರು ಹಾಗೂ ಪತಿಯೊಂದಿಗೆ ವಾಸವಾಗಿದ್ದಾರೆ. ತಮ್ಮ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದಾಗಿನಿಂದ ಕೊಲೆ ಬೆದರಿಕೆಗಳನ್ನು ಎದುರಿಸುತ್ತಿರುವ ರೂಬಿ ಆಸಿಫ್ ಖಾನ್, ಇದಕ್ಕೆಲ್ಲ ನಾನು ಹೆದರುವುದಿಲ್ಲ ಎಂದು ಹೇಳಿದ್ದಾರೆ. ವಿಗ್ರಹವನ್ನು ಪೂಜಿಸಿದ್ದಕ್ಕಾಗಿ ಆಕೆಯ ವಿರುದ್ಧ ಫತ್ವಾ ಕೂಡ ಹೊರಡಿಸಲಾಗಿದೆ. ಇದನ್ನೂ ಓದಿ: ಸುದ್ದಿಗೋಷ್ಠಿ ವೇಳೆ ಮಾನನಷ್ಟ ನೋಟಿಸ್ನ್ನು ಹರಿದ ಆಪ್ ಸಂಸದ
ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನಾನು ನರೋರಾ ಘಾಟ್ನಲ್ಲಿ ಗಣೇಶನ ವಿಗ್ರಹವನ್ನು ವಿಸರ್ಜನೆಗೆ ತೆಗೆದುಕೊಂಡು ಹೋಗುತ್ತಿದ್ದೇನೆ. ಆಗಸ್ಟ್ 31 ರಂದು ನನ್ನ ನಿವಾಸದಲ್ಲಿ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದೆ. ಅಂದಿನಿಂದ ಈ ಫತ್ವಾ ಹೊರಡಿಸಲಾಗಿದೆ. ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿದ ಕಾರಣ ನಾನು ಹಿಂದೂ ಆಗಿದ್ದೇನೆ. ನನ್ನನ್ನು ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವ ಮತ್ತು ನನ್ನ ಕುಟುಂಬವನ್ನು ಜೀವಂತವಾಗಿ ಸುಡುವ ಬೆದರಿಕೆಗಳು ಬರುತ್ತಿವೆ. ನಾನು ಹೊರಗೆ ಹೋದಾಗ, ಜನರು ನನ್ನನ್ನು ಹಿಂದೂ ಎಂದು ಕರೆಯುತ್ತಿದ್ದಾರೆ. ಗಣೇಶ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದು, ಹಾಗೆಯೇ ವಿಸರ್ಜಿಸುತ್ತೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಧರ್ಮಗುರುಗಳು ಆಕೆಯ ವಿರುದ್ಧ ಫತ್ವಾ ಹೊರಡಿಸಿ, ಇಸ್ಲಾಂ ಧರ್ಮದಿಂದ ಬಹಿಷ್ಕರಿಸುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮಾನ್ಯತೆ ಪಡೆಯದ ಮದರಸಾಗಳ ಸಮೀಕ್ಷೆ – ಯುಪಿ ಸರ್ಕಾರದ ನಿರ್ಧಾರ ಸ್ವಾಗತಿಸಿದ ಮುಸ್ಲಿಂ ಮಂಡಳಿ
ನನಗೆ ಭದ್ರತೆ ಒದಗಿಸುವಂತೆ ಜಿಲ್ಲಾಡಳಿತವನ್ನು ಕೇಳಿಕೊಂಡರೂ ಪ್ರಯೋಜನವಾಗಿಲ್ಲ. ಆದರೆ ನನ್ನ ಮನೆಗೆ ದಿನಕ್ಕೆ ಎರಡು ಅಥವಾ ಮೂರು ಗಂಟೆಗಳ ಕಾಲ ಪೊಲೀಸ್ ಪೇದೆ ಬರುತ್ತಾನೆ. ಇವತ್ತಿಗೆ ನನ್ನ ಭದ್ರತೆಗೆ ಪೊಲೀಸ್ ಠಾಣೆಯಿಂದ ಇಬ್ಬರು ಅಧಿಕಾರಿಗಳನ್ನು ಕಳುಹಿಸಲಾಗಿದೆ ಎಂದು ರೂಬಿ ತಿಳಿಸಿದ್ದಾರೆ.