ತಿರುವನಂತಪುರಂ: ಕೇರಳ ನಾಯಕರು ಜೆಡಿಎಸ್-ಬಿಜೆಪಿ ಮೈತ್ರಿಗೆ (BJP-JDS Alliance) ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು (H.D.Devegowda) ನೀಡಿರುವ ಹೇಳಿಕೆ ಸುಳ್ಳು ಮತ್ತು ಅಸಂಬದ್ಧ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸ್ಪಷ್ಟನೆ ನೀಡಿದ್ದಾರೆ.
ಕರ್ನಾಟಕದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಕೇರಳದ ಸಿಪಿಐ (ಎಂ) ನಾಯಕರು ಸಹಮತ ವ್ಯಕ್ತಪಡಿಸಿದ್ದಾರೆ ಎಂದು ಹೆಚ್ಡಿಡಿ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಪಿಣರಾಯ್ ವಿಜಯನ್ (Pinarayi Vijayan), ಈ ವಿಚಾರ ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕಲೆಕ್ಷನ್ನಲ್ಲೂ ಸಿಎಂ, ಡಿಸಿಎಂ ನಡುವೆ ತೀವ್ರ ಸ್ಪರ್ಧೆ: ಡಿ.ವಿ.ಸದಾನಂದಗೌಡ
ಕೇರಳದಲ್ಲಿ ಪಿಣರಾಯಿ ವಿಜಯನ್ ಅವರ ಸಿಪಿಐ(ಎಂ) ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಇತ್ತೀಚೆಗೆ ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಮೈತ್ರಿಕೂಟಕ್ಕೆ (ಎನ್ಡಿಎ) ಸೇರ್ಪಡೆಯಾಗಿದೆ. ಈ ನಿರ್ಧಾರವು ರಾಜ್ಯದ ಅನೇಕ ಜೆಡಿಎಸ್ ನಾಯಕರಿಗೆ ಇಷ್ಟವಾಗಲಿಲ್ಲ. ಪಕ್ಷದ ಕೇರಳ ಘಟಕವೂ ಸಹ ಎನ್ಡಿಎ ಸೇರುವ ಕೇಂದ್ರ ನಾಯಕತ್ವದ ನಿರ್ಧಾರವನ್ನು ತಿರಸ್ಕರಿಸಿತು.
ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರ ಸೇರಿದಂತೆ ಜೆಡಿಎಸ್ನ ಎಲ್ಲಾ ರಾಜ್ಯ ಘಟಕಗಳು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಒಪ್ಪಿಗೆ ನೀಡಿವೆ ಎಂದು ದೇವೇಗೌಡರು ಗುರುವಾರ ಪ್ರತಿಪಾದಿಸಿದ್ದರೆಂದು ವರದಿಯಾಗಿತ್ತು. ಇದನ್ನೂ ಓದಿ: ಮೈಸೂರಿನಲ್ಲೂ ಮೆಟ್ರೋ ವಿಸ್ತರಣೆ, ರಾಜ್ಯಕ್ಕೆ 1200 ಎಲೆಕ್ಟ್ರಿಕ್ ಬಸ್: ಮೋದಿ ಭರವಸೆ
ಕೇರಳದಲ್ಲಿ ನಾವು ಸರ್ಕಾರದ ಭಾಗವಾಗಿದ್ದೇವೆ. ನಮ್ಮ ಶಾಸಕರು ಅಲ್ಲಿ ಮಂತ್ರಿಯಾಗಿದ್ದಾರೆ. ಈ ಘಟಕಗಳು ನಾವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಪರಿಸ್ಥಿತಿಯನ್ನು ಅರ್ಥಮಾಡಿಕೊಂಡಿವೆ. ನಮ್ಮ ನಡೆಯನ್ನು ಬೆಂಬಲಿಸಿವೆ. ಕೇರಳದ ಎಡ ಸರ್ಕಾರದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ಪಕ್ಷವನ್ನು (ಜೆಡಿಎಸ್) ಉಳಿಸಲು ಕರ್ನಾಟಕದಲ್ಲಿ ಬಿಜೆಪಿಯೊಂದಿಗೆ ಮುಂದುವರಿಯಲು ಸಂಪೂರ್ಣ ಒಪ್ಪಿಗೆ ನೀಡಿದ್ದಾರೆ ಎಂದಿದ್ದರು.
ದೇವೇಗೌಡರ ಹೇಳಿಕೆಗೆ ಪ್ರತಿಕ್ರಿಯಿಸಿದ ಪಿಣರಾಯಿ ವಿಜಯನ್, ಜೆಡಿಎಸ್ ನಾಯಕರ ಹೇಳಿಕೆ ಸುಳ್ಳು ಮತ್ತು ಸಂಪೂರ್ಣ ಅಸಂಬದ್ಧ. ಅವರು ತಮ್ಮ ರಾಜಕೀಯ ಮೇಲಾಟಗಳನ್ನು ಸಮರ್ಥಿಸಿಕೊಳ್ಳಲು ಸುಳ್ಳು ಹೇಳುತ್ತಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಡಿಕೆಶಿ ಬೆಳಗಾವಿ ಮಾತ್ರವಲ್ಲ ರಾಜ್ಯ, ರಾಷ್ಟ್ರ ರಾಜಕಾರಣವನ್ನೂ ಮಾಡ್ತಾರೆ: ಅಶೋಕ್ ಪಟ್ಟಣ
ದೇವೇಗೌಡರು ತಮ್ಮ ಪುತ್ರ ಕುಮಾರಸ್ವಾಮಿಗೆ ಮುಖ್ಯಮಂತ್ರಿ ಗಾದಿಯನ್ನು ಕೊಡಿಸಲು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ತಮ್ಮ ಪಕ್ಷದ ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಎಂದು ಪಿಣರಾಯಿ ವಿಜಯನ್ ಆರೋಪಿಸಿದ್ದಾರೆ.
Web Stories