ಶಿವಮೊಗ್ಗ/ಕೊಪ್ಪಳ: ರಾಜ್ಯದ ಹಲವೆಡೆ ಆಗುತ್ತಿರುವ ಅಕಾಲಿಕ ಮಳೆಗೆ ರೈತರು ಕಂಗಾಲಾಗಿದ್ದಾರೆ. ಕೊಪ್ಪಳದ ಗಂಗಾವತಿ ತಾಲೂಕಿನಲ್ಲಿ ಎರಡ್ಮೂರು ದಿನಗಳಿಂದ ಜಿಟಿಜಿಟಿ ಮಳೆ ಆಗುತ್ತಿದ್ದು, ಭತ್ತದ ಬೆಳೆ ನೆಲಕಚ್ಚಿದೆ. ಸೋನೆ ಮಳೆಯಲ್ಲೇ ಬೆಳೆ ಕಟಾವು ಮಾಡಿದ ರೈತರಿಗೆ ಭತ್ತದ ರಾಶಿಯನ್ನ ರಕ್ಷಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿದೆ.
ಭತ್ತದ ಇಳುವರಿ ಕುಂಠಿತಗೊಂಡಿದ್ದು, ಇದರ ಜೊತೆಗೆ ಭತ್ತದ ಬೆಲೆಯೂ ಕಡಿಮೆಯಾಗಿದೆ. ಹೀಗಾಗಿ ರೈತರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇತ್ತ ಶಿವಮೊಗ್ಗದಲ್ಲೂ ಕೈಗೆ ಬಂದ ತುತ್ತು, ಬಾಯಿಗೆ ಬರದಂತಾಗಿದೆ. ತೀರ್ಥಹಳ್ಳಿ, ಭದ್ರಾವತಿ, ಹೊಸನಗರ, ಶಿಕಾರಿಪುರ ಸೇರಿದಂತೆ ಬಹುತೇಕ ಭಾಗಗಳಲ್ಲಿ ಬೆಳೆದ ಭತ್ತ ಕಟಾವಿಗೆ ಬಂದಿತ್ತು. ಅಷ್ಟರಲ್ಲಿ ಮಳೆಯಾಗಿದ್ರಿಂದ ಎಲ್ಲಾ ಬೆಳೆ ನೆಲಕಚ್ಚಿದೆ.
ಕಟಾವಿಗೆ ಬಂದಿದ್ದ ಯಂತ್ರಗಳು ಸುಮ್ಮನೆ ನಿಲ್ಲಿಸಿಕೊಂಡು ರೈತರು ನಷ್ಟ ಅನುಭವಿಸಿದ್ರೆ, ಅತ್ತ ಭತ್ತದ ಬೆಳೆಗೆ ಕಪ್ಪು ಕಲೆ ಆವರಿಸಿ ಬೇಡಿಕೆ ಕಳೆದುಕೊಳ್ಳುತ್ತಿದೆ. ಕಳೆದ ಎರಡ್ಮೂರು ದಿನಗಳಿಂದಲೂ ಬೆಂಗಳೂರಿನಲ್ಲಿಯೂ ಮೋಡ ಮುಸುಕಿದ ವಾತಾವರಣವಿದ್ದು, ಅಲ್ಲಲ್ಲಿ ತುಂತುರು ಮಳೆಯಾಗಿದೆ.