ಬೆಂಗಳೂರು: ಆರ್ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಪ್ಯಾಸೆಂಜರ್ ವಾಹನದಲ್ಲಿ ಅಪರಿಚಿತ ಮೃತದೇಹ ಪತ್ತೆಯಾಗಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಸುಮಾರು 30 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ನೆಲಮಂಗಲ ತಾಲೂಕಿನ ಡಾಬಸ್ಪೇಟೆ ಪೊಲೀಸ್ ಠಾಣೆ ಎದುರು ಆರ್ಟಿಓ ಅಧಿಕಾರಿಗಳು ವಶಕ್ಕೆ ಪಡೆದಿದ್ದ ಟಾಟಾ ಏಸ್ ಮ್ಯಾಜಿಕ್ ಪ್ಯಾಸೆಂಜರ್ ವಾಹನವನ್ನು ನಿಲ್ಲಿಸಿಟ್ಟಿದ್ದರು. ಆದರೆ ಇಂದು ಆ ವಾಹನದಲ್ಲಿ ವ್ಯಕ್ತಿಯ ಶವ ಪತ್ತೆಯಾಗಿದೆ.
ಪೊಲೀಸರಿಗೆ ಈ ವ್ಯಕ್ತಿಯ ಬಗ್ಗೆ ಯಾವುದೇ ಮಾಹಿತಿ ದೊರಕಿಲ್ಲ. ಆದರೆ ವಶಕ್ಕೆ ಪಡೆದು ನಿಲ್ಲಿಸಿಟ್ಟಿದ್ದ ವಾಹನದಲ್ಲಿ ಮೃತದೇಹ ಹೇಗೆ ಬಂತು ಎಂಬುದೇ ಪೊಲೀಸರಿಗೆ ತಲೆನೋವಾಗಿದೆ. ಅದರಲ್ಲೂ ಪೊಲೀಸ್ ಠಾಣೆ ಅವರಣದಲ್ಲಿ ಈ ಘಟನೆ ನಡೆದಿರುವುದು ಹಲವು ಅನುಮಾನಗಳನ್ನು ಹುಟ್ಟುಹಾಕಿದೆ. ಸದ್ಯ ಈ ಬಗ್ಗೆ ಡಾಬಸ್ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಪ್ರಕರಣ ಸಂಬಂಧ ತನಿಖೆ ಕೈಗೊಂಡಿದ್ದಾರೆ.