ನವದೆಹಲಿ: ಭಾರತೀಯ ವಾಯು ಪಡೆಯ ಪೈಲಟ್ ಅಭಿನಂದನ್ ಅವರು ಮಾತೃ ಭೂಮಿಗೆ ಮರಳಿದ್ದಕ್ಕೆ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ. ಈ ಕುರಿತು ಅನೇಕ ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದು, ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು, ಅಭಿನಂದನ್ ಅವರನ್ನು ಮಾತೃ ಭೂಮಿಗೆ ಕರೆಸಿಕೊಂಡಿದ್ದು, ಪ್ರಧಾನಿ ಮೋದಿ ಅವರ ಪರಾಕ್ರಮ ಹಾಗೂ ಆರ್ಎಸ್ಎಸ್ ಕಾರ್ಯಕರ್ತರ ಶೌರ್ಯ ಎಂದು ಹೇಳಿದ್ದಾರೆ.
ಬಿಜೆಪಿ ಮುಖಂಡ ಸುಧಾಂಶು ಮಿತ್ತಲ್ ಅವರ `ಆರ್ಎಸ್ಎಸ್: ಬಿಲ್ಡಿಂಗ್ ಇಂಡಿಯ ಥ್ರೂ ಸೇವಾ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವೆ ಸ್ಮೃತಿ ಇರಾನಿ ಅವರು, ಆರ್ಎಸ್ಎಸ್ ಸ್ವಯಂಸೇವಕ ಸಂಘದ ಪರಾಕ್ರಮದಿಂದಾಗಿ 48 ಗಂಟೆಗಳಲ್ಲಿ ಅಭಿನಂದನ್ ಅವರು ಭಾರತಕ್ಕೆ ಮರಳಿದ್ದಾರೆ. ಇದು ಆರ್ಎಸ್ಎಸ್ ಹೆಮ್ಮೆಪಡುವ ವಿಷಯವಾಗಿದೆ ಎಂದರು. ಇದನ್ನೂ ಓದಿ: ವೀರ ಯೋಧ ‘ಅಭಿ’ನಂದನ್ಗೆ ನಮೋ ಎಂದ ಮೋದಿ
ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಸೇರುವ ಮುನ್ನ ಆರ್ಎಸ್ಎಸ್ ಕಾರ್ಯಕರ್ತರಾಗಿದ್ದರು. ಹೀಗಾಗಿ ಅಭಿನಂದನ್ ಅವರನ್ನು ಮಾತೃ ಭೂಮಿಗೆ ಕರೆತರುವಲ್ಲಿ ಆರ್ಎಸ್ಎಸ್ ಪಾತ್ರ ದೊಡ್ಡದಾಗಿದೆ ಎಂದು ಪರೋಕ್ಷವಾಗಿ ಹೇಳಿದ್ದಾರೆ.
ಇದೇ ವೇಳೆ ಮಾತನಾಡಿದ ಆರ್ಎಸ್ಎಸ್ ಜಂಟಿ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರು ಮಾತನಾಡಿ, ಪಾಕಿಸ್ತಾನದ ಬಂಧನಲ್ಲಿದ್ದ ಪೈಲಟ್ ಅಭಿನಂದನ್ ಅವರ ಪರವಾಗಿ ದೇಶದ ಜನ ಧ್ವನಿ ಎತ್ತಿತ್ತು. ಅಭಿನಂದನ್ ಅವರು ಮಾತೃ ಭೂಮಿಗೆ ಮರಳಿದಕ್ಕೆ ದೇಶದಲ್ಲಿ ಸಂಭ್ರಮ ಮನೆ ಮಾಡಿದೆ ಎಂದರು.
ಯಾವುದೇ ತಾರತಮ್ಯ ಮಾಡದೇ ಸಂಘದ ಕಾರ್ಯಕರ್ತರು ಸಮಾಜದಲ್ಲಿ ಸೇವೆ ಸಲ್ಲಿಸಬೇಕು ಎಂದು ದತ್ತಾತ್ರೇಯ ಹೊಸಬಾಳೆ ತಿಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv