ವಿಜಯಪುರ: ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಭಯೋತ್ಪಾದಕ ಇದ್ದಂತೆ. ಅವರು ಕ್ಷೇತ್ರದಲ್ಲಿ ಏನೂ ಕೆಲಸ ಮಾಡಿಲ್ಲ ಎಂದು ನಾಗಠಾಣ ಜೆಡಿಎಸ್ ಶಾಸಕ ದೇವಾನಂದ ಚವ್ಹಾಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಾಂಕೇತಿಕವಾಗಿ ಮೈತ್ರಿ ಅಭ್ಯರ್ಥಿ ಸುನಿತಾ ಚವ್ಹಾಣ್ ನಾಮಪತ್ರ ಸಲ್ಲಿಕೆ ನಂತರ ಮಾತನಾಡಿದ ಅವರು, ಅಕ್ಕ-ಕಾಕಾ-ಮಾಮಾ ಎಂದು ರಮೇಶ್ ಜಿಗಜಿಣಗಿ ರಾಜಕಾರಣ ಮಾಡಿದ್ದಾರೆ. ವಿಜಯಪುರಕ್ಕೆ ಅವರ ಕೊಡುಗೆ ಶೂನ್ಯ, ಯಾವುದೇ ಅಭಿವೃದ್ಧಿ ಮಾಡಿಲ್ಲ. ಎರಡು ಬಾರಿ ಅವಕಾಶ ನೀಡಿದರೂ ಪ್ರಯೋಜನ ಆಗಿಲ್ಲ. ಅಭಿವೃದ್ಧಿ ಮಾಡದೇ ಜಿಲ್ಲೆಗೆ ಜಿಗಜಿಣಗಿ ಭಯೋತ್ಪಾದಕ ಆಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಅಭಿವೃದ್ಧಿ ಮಾಡದವರು ಭಯೋತ್ಪಾದಕರು ಇದ್ದಂತೆ. ಜನರು ಜಿಗಜಿಣಗಿ ಅವರ ಮೇಲೆ ಭರವಸೆ ಇಟ್ಟು ಆಯ್ಕೆ ಮಾಡಿದ್ದರು. ಆದ್ರೆ ಅವರು ಜನರಿಗಾಗಿ ಯಾವ ಕೆಲಸ ಕೂಡ ಮಾಡಿಲ್ಲ. ಬಾಯಿ ಮಾತಿನಲ್ಲಿ ಜನರಿಗೆ ಭರವಸೆ ನೀಡಿ ಸುಮ್ಮನಾಗ್ತಾರೆ. ಇದೆಂಥ ರಾಜಕಾರಣ, ಅವರ ಸೋಲನ್ನು ಈಗಾಗಲೇ ಅವರೇ ಒಪ್ಪಿಕೊಂಡಿದ್ದಾರೆ ಎಂದು ದೇವಾನಂದ ಚವ್ಹಾಣ್ ಆಕ್ರೋಶ ಹೊರಹಾಕಿದರು.