ಸಿಕಂದರಾಬಾದ್: ಕೇಂದ್ರ ಸಂಸ್ಕೃತಿ ಮತ್ತು ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವ ಮಹೇಶ್ ಶರ್ಮಾ ಪ್ರಿಯಾಂಕಾ ಗಾಂಧಿ ವಾದ್ರಾ ಅವರನ್ನು ‘ಪಪ್ಪು ಕಿ ಪಪ್ಪಿ’ ಎಂದು ಕರೆದು ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.
ಸಿಕಂದರಾಬಾದ್ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಶರ್ಮಾ, ಒಂದುವೇಳೆ ಮಮತಾ ಬ್ಯಾನರ್ಜಿ ಇಲ್ಲಿಗೆ ಬಂದು ಕಥಕ್ ಡ್ಯಾನ್ಸ್ ಮಾಡುತ್ತಿದ್ದರೆ, ಕರ್ನಾಟಕ ಸಿಎಂ ಹಾಡು ಹಾಡಿದರೆ ಕೇಳುವವರು ಯಾರು? ಪಪ್ಪು(ರಾಹುಲ್ ಗಾಂಧಿ) ತಾನು ಪ್ರಧಾನಿಯಾಗುತ್ತೇನೆ ಎಂದು ಹೇಳ್ತಾರೆ. ಅದಕ್ಕಾಗಿ ಪಪ್ಪು ಒಂದು ಪಪ್ಪಿಯನ್ನು (ಪ್ರಿಯಾಂಕಾ ಗಾಂಧಿ) ತಂದಿದ್ದಾರೆ. ಆದ್ರೆ ಇವರೆಲ್ಲರಿಗಿಂತ ಮೇಲಿರುವುದು ನಮ್ಮ ಹುಲಿ ಮೋದಿ ಅವರು ಎಂದು ಹೇಳಿದರು.
ಇದೇ ವೇಳೆ ಕರ್ನಾಟಕದ ಸಿಎಂ ಎಚ್.ಡಿ ಕುಮಾರಸ್ವಾಮಿ ಹಾಗೂ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಪ್ರಾದೇಶಿಕ ನಾಯಕರಷ್ಟೇ. ಆದ್ರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಷ್ಟ್ರೀಯ ನಾಯಕರು ಎಂದು ಶರ್ಮಾ ಹೇಳಿದರು.
ಈ ಹಿಂದೆ ಶುಕ್ರವಾರದಂದು, ಉದ್ಯೋಗಾವಕಾಶ, ಶಿಕ್ಷಣ ಮತ್ತು ಇತರ ಮೂಲ ಸೌಕರ್ಯಗಳ ಕುರಿತು ಮಾತನಾಡುತ್ತ, ದೇವರು ಕೂಡ ಎಲ್ಲ ನಿಮ್ಮ ಬೇಡಿಕೆಯನ್ನು ಈಡೇರಿಸಲ್ಲ, ಹಾಗಿದ್ದರೆ ಒಬ್ಬ ಸಂಸದ ಹೇಗೆ ತಾನೇ ಜನರ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ಸಾಧ್ಯ ಎಂದು ಪ್ರಶ್ನಿಸಿದರು.
ಈ ಮಧ್ಯೆ ಪ್ರಿಯಾಂಕಾ ಗಾಂಧಿ ವಾದ್ರ ಅವರು ಮೂರು ದಿನಗಳ ಕಾಲ ಗಂಗಾ ಯಾತ್ರೆ ಮಾಡುವ ಪ್ಲಾನ್ ಹಾಕಿದ್ದು, ಪ್ರಯಾಗ್ರಾಜ್ನಿಂದ ವಾರಾಣಸಿಗೆ ದೋಣಿಯ ಮೂಲಕ ಯಾತ್ರೆ ನಡೆಸುವ ಅವರು, ಪಕ್ಷದ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಅಲ್ಲದೆ ಗಂಗಾ ಯಾತ್ರೆ ನಡೆಸುವುದರಿಂದ ಈ ಭಾಗದ ಜನರ ಜೊತೆ ಬೆರೆಯುವ ಅವಕಾಶ ನನಗೆ ಸಿಗುತ್ತಿದೆ ಎಂದು ಪ್ರಿಯಾಂಕಾ ಹೇಳಿದ್ದಾರೆ.