– ಮನೆಯಲ್ಲಿ ಗೌರವದಿಂದ ಇದ್ದ ತಮ್ಮ ಪತ್ನಿಯನ್ನು ಹೊರಗೆ ತಂದಿದ್ದು ಸಿದ್ದರಾಮಯ್ಯರೇ: ಕುಮಾರಸ್ವಾಮಿ ತಿರುಗೇಟು
ಬೆಂಗಳೂರು: ನಾನು 14 ತಿಂಗಳಲ್ಲಿ ಮಾಡಿದ ಕೆಲಸ ಬಗ್ಗೆ ಸಿದ್ದರಾಮಯ್ಯಗೆ ಚಾಲೆಂಜ್ ಮಾಡ್ತೀನಿ. ಅವರೇನು ಮಾಡಿದ್ದಾರೆ ನಾನೇನು ಮಾಡಿದ್ದೀನಿ ಅಂತಾ ಚರ್ಚೆ ಆಗಲಿ. ಇದು ನನ್ನ ಓಪನ್ ಚಾಲೆಂಜ್ ಎಂದು ಸಿಎಂ ಸಿದ್ದರಾಮಯ್ಯಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಸವಾಲು ಹಾಕಿದರು.
ನಗರದಲ್ಲಿ ಮಾತನಾಡಿದ ಹೆಚ್ಡಿಕೆ, ಕೊಟ್ಟ ಕುದುರೆ ಏರದವನು ವೀರನೂ ಅಲ್ಲ ಶೂರನೂ ಅಲ್ಲ ಅಂದಿದ್ದಾರೆ. ಯಾವ ಕುದುರೆ ಕೊಟ್ಟಿದ್ರು ಅವರು ನನಗೆ? ನಾನು 14 ತಿಂಗಳಲ್ಲಿ ಮಾಡಿದ ಕೆಲಸ ಬಗ್ಗೆ ಸಿದ್ದರಾಮಯ್ಯಗೆ ಚಾಲೆಂಜ್ ಮಾಡ್ತೀನಿ. ನಾನು ಬಹಿರಂಗ ಸವಾಲು ಹಾಕ್ತೀನಿ ಸಿದ್ದರಾಮಯ್ಯಗೆ. ಅವರ ಈ 15 ತಿಂಗಳಲ್ಲಿ ಅವರೇನು ಮಾಡಿದ್ರು, ನಾನು 2018 ರಲ್ಲಿ 14 ತಿಂಗಳಲ್ಲಿ ಏನು ಕೆಲಸ ಮಾಡಿದ್ದೀನಿ. ಇವರ ಸಹಕಾರ ಸರಿಯಾಗಿರದಿದ್ದರೂ 14 ತಿಂಗಳಲ್ಲಿ ಅಭಿವೃದ್ಧಿ ಕೆಲಸ ಮಾಡಿದ್ದೀನಿ. ಅವರೇನು ಮಾಡಿದ್ದಾರೆ, ನಾನೇನು ಮಾಡಿದ್ದೀನಿ ಅಂತಾ ಚರ್ಚೆ ಆಗಲಿ, ಇದು ನನ್ನ ಓಪನ್ ಚಾಲೆಂಜ್. ಚರ್ಚೆ ಮಾಡೋಣ, ಚರ್ಚೆಗೆ ನಾನು ಸಿದ್ಧ ಇದ್ದೀನಿ. ನಮ್ಮ 38 ಜನ ಶಾಸಕರು ಇದ್ರು, ನಿಮ್ಮ ಬೆಂಬಲ ಇರಲಿಲ್ಲ. ನೀವೇನು ನಡೆಸಿದ್ದೀರಿ, ಚರ್ಚೆ ಆಗಲಿ. ಇವತ್ತು ಹೇಳ್ತಿದ್ದೀರಲ್ಲ ಕುಮಾರಸ್ವಾಮಿ ಕೆಲಸ ಮಾಡಿಲ್ಲ ಅಂತಾ ಎಂದು ಸಿದ್ದರಾಮಯ್ಯ ವಿರುದ್ಧ ಗುಡುಗಿದರು. ಇದನ್ನೂ ಓದಿ: ಬೆಂಗಳೂರಲ್ಲಿ ಮಳೆ ಅವಾಂತರ: ಕೆಸರು ನೀರಲ್ಲಿ ಬಿದ್ದ ಬೈಕ್ ಸವಾರ
ಮಾತು ಮಾತಿಗೆ ಹೊಟ್ಟೆ ಉರಿ ಅಂತಿದ್ದಾರೆ. ಅವರೇ ಅವರ ಪತ್ನಿಯನ್ನು ಹೊರಗೆ ತಂದವರು. ಯಾರು ತಂದಿದ್ದು ಅವರನ್ನು ಹೊರಗೆ, ನೀವೇ. ಮನೆಯಲ್ಲಿ ಗೌರವದಿಂದ ಇದ್ದವರನ್ನು ಹೊರಗೆ ತಂದಿದ್ದು ಅವರು. ನಿಮ್ಮ ನಡವಳಿಕೆಯಿಂದ ಅವರು ಹೊರಗೆ ಬಂದಂತಾಗಿದೆ. ನೀವೇ ತಪ್ಪು ಮಾಡಿ ಇಂತಹ ವಿಷಯಗಳನ್ನೆಲ್ಲ ಯಾಕೆ ಜನರ ಮುಂದೆ ಹೇಳ್ತೀರ ಈಗ. ಮಾತೆತ್ತಿದರೆ ಅಹಿಂದ ಅಹಿಂದ ಅನ್ನುತ್ತಾರೆ. ಅಹಿಂದ ವರ್ಗಗಳಿಗೆ ಸಿದ್ದರಾಮಯ್ಯ ಏನು ಮಾಡಿದ್ದಾರೆ ಹೇಳಲಿ. ವಾಲ್ಮೀಕಿ ನಿಗಮದಲ್ಲಿ ಲೂಟಿ ಹೊಡೆದಿರೋದು ನೋಡಿದ್ದೀವಲ್ಲ ಎಂದು ಟಾಂಗ್ ಕೊಟ್ಟರು.
ಮಳೆ ಅವಾಂತರ ಕುರಿತು ಮಾತನಾಡಿ, ಈ ಸರ್ಕಾರ ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸ ಮಾಡ್ತಿಲ್ಲ. ಎಲ್ಲದರಲ್ಲೂ ಸರ್ಕಾರ ವಿಫಲವಾಗಿದೆ. ಹಲವು ಕುಟುಂಬಗಳ ಮನೆಗಳು ಜಲಾವೃತ ಆಗಿವೆ, ರಾತ್ರಿ ಎಲ್ಲ ಜನರಿಗೆ ನಿದ್ದೆ ಇಲ್ಲ. ಗುಂಡಿ ಮುಚ್ಚಲು ಅದೇನೋ ಗಡುವು ಕೊಟ್ಟಿದ್ರಲ್ಲ. ಅವರೇ ಹಾರೆ ಹಿಡಿದು ಗುಂಡಿ ಮುಚ್ಚಲು ಹೋಗಿದ್ರಲ್ಲ. ಈ ಸರ್ಕಾರಕ್ಕೆ ಜನರ ಸಮಸ್ಯೆ ಬಗ್ಗೆ ಚಿಂತೆ ಇಲ್ಲ. ಅಭಿವೃದ್ಧಿ ಕೆಲಸಗಳ ಬಗ್ಗೆ ದೇವರೇ ಕಾಪಾಡಬೇಕು. ಈಗಲೂ ಕಾಲ ಮಿಂಚಿಲ್ಲ, ಮಳೆ ಅನಾಹುತ ಆಗಿದೆ. ನಿಮ್ಮ ಆಡಳಿತ ಸರಿ ಮಾಡ್ಕೊಳ್ಳಿ. ವಿಪಕ್ಷಗಳನ್ನು ಕ್ಷಮಿಸ್ತೀರಾ ಕ್ಷಮಿಸ್ತೀರಾ ಅಂತಾ ನಿನ್ನೆ ಹೇಳ್ತಿದ್ರು. ನಮ್ಮನ್ನ ಜನ ಕ್ಷಮಿಸ್ತಾರೋ ಅಪ್ಪಿಕೊಳ್ತಾರೋ ಅದನ್ನು ಜನ ತೀರ್ಮಾನ ಮಾಡ್ತಾರೆ. ಅದೇ ಜನ ಸಿದ್ದರಾಮಯ್ಯ ಅವರಿಗೇ ಏನು ಮಾಡಬೇಕು ಅಂತಾ ಹೇಳಲಿ. ಇಂಥ ಆಡಳಿತ ಕೊಟ್ಟಿದ್ದೀರಲ್ಲ ಜನರ ಕ್ಷಮೆ ಅವರು ಕೇಳಬೇಕು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮುಮ್ತಾಜ್ ಅಲಿ ನಾಪತ್ತೆ
ಜಾತಿಗಣತಿ ಇದೆಲ್ಲ ರಾಜಕೀಯ, ಇಷ್ಟು ದಿನ ಜಾರಿ ಮಾಡಲಿಲ್ಲ. ಈಗೇನು ಜಾರಿ ಮಾಡ್ತಾರೆ ಅವರು? ಇದೆಲ್ಲ ರಾಜಕೀಯ ಅಷ್ಟೇ ಎಂದು ಪ್ರತಿಕ್ರಿಯಿಸಿದರು.