ಮೈಸೂರು: ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ (Amit Shah) ಅವರು ಬಿಜೆಪಿ ನಾಯಕರ ಜೊತೆ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಿದರು. ಮೈತ್ರಿ ಧರ್ಮ ಪಾಲಿಸುವಂತೆ ನಾಯಕರಿಗೆ ಸೂಚನೆ ನೀಡಿದರು.
ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ ಕ್ಷೇತ್ರಕ್ಕೆ ಸಂಬಂಧ ಪಟ್ಟಂತೆ ಸಭೆ ನಡೆಸಿದರು. ಮೈತ್ರಿ ವಿಚಾರದಲ್ಲಿ ಮಾತಾಡಬೇಡಿ. ಮೈತ್ರಿ ಹೈಕಮಾಂಡ್ ನಿರ್ಧಾರ. ಯಾವ ಕ್ಷೇತ್ರ ಯಾರಿಗೆ ಎಂಬುದನ್ನು ನಾವು ತೀರ್ಮಾನ ಮಾಡ್ತೀವಿ ಎಂದು ತಿಳಿಸಿದರು. ಇದನ್ನೂ ಓದಿ: ಚಾಮುಂಡಿ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿದ ಗೃಹ ಸಚಿವ ಅಮಿತ್ ಶಾ
ನೀವು ಕೂತಲ್ಲಿ ನಿಂತಲ್ಲಿ ನಿಮ್ಮ ಅಭಿಪ್ರಾಯ ಹೇಳಬೇಡಿ. ನಿಮ್ಮ ಮಾತಿನಿಂದ ಮೈತ್ರಿ ಧರ್ಮಕ್ಕೆ ಚೂರು ಧಕ್ಕೆಯಾದರೂ ನಾವು ಸಹಿಸಲ್ಲ. ಸೀಟು ಹಂಚಿಕೆ ಬಗ್ಗೆ ಮಾತಾಡುವವರಿಗೆ ಅಮಿತ್ ಶಾ ಖಡಕ್ ವಾರ್ನಿಂಗ್ ನೀಡಿದರು. ಮೈತ್ರಿ ಧರ್ಮ ಪಾಲನೆ ಬಗ್ಗೆ ಕಠಿಣ ಪಾಠ ಹೇಳಿದರು.
ಮೈಸೂರು ಕ್ಷೇತ್ರದ ಬಗ್ಗೆ ಹೆಚ್ಚಿನ ಗಮನ ಇರಲಿ. ಸಿಎಂ ಕ್ಷೇತ್ರದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ. ಗೆಲುವಲ್ಲ ಈ ಕ್ಷೇತ್ರದ ಲೀಡ್ ಕೂಡ ನಮಗೆ ಮುಖ್ಯ. ದೊಡ್ಡ ಲೀಡ್ ಬಂದರೆ ರಾಜಕೀಯವಾಗಿ ಅದು ಬೇರೆಯದೆ ಸಂದೇಶ ರವಾನೆ ಆಗುತ್ತೆ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರಿಗೆ ಅಮಿತ್ ಶಾ ಸೂಚನೆ ನೀಡಿದರು. ಇದನ್ನೂ ಓದಿ: ಅಮಿತ್ ಶಾ ಕರ್ನಾಟಕಕ್ಕೆ ಬರಿಗೈಯಲ್ಲಿ ಬಂದಿದ್ದಾರೆ: ಸಿಎಂ ವಾಗ್ದಾಳಿ