– ವರ್ಷಾಂತ್ಯಕ್ಕೆ ಪ್ರಧಾನಿ ಮೋದಿ ಅವರಿಂದ ಅಡಿಗಲ್ಲು: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ
ನವದೆಹಲಿ: ಭದ್ರಾವತಿಯ ಸರ್ ಎಂ.ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವ ಪ್ರಯತ್ನ ನಡೆಯುತ್ತಿದ್ದು, ವಿಸ್ತೃತ ಯೋಜನಾ ವರದಿ (DPR) ಎರಡು ತಿಂಗಳಲ್ಲಿ ಸಿದ್ಧವಾಗಲಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ (H.D.Kumaraswamy) ಹೇಳಿದರು.
ನವದೆಹಲಿಯ ಮಾಧ್ಯಮಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ರಾಜಕೀಯ ಮಾಡುವ ಪ್ರಶ್ನೆ ಇಲ್ಲ ಎಂಬುದನ್ನು ಒತ್ತಿ ಹೇಳಿದರು. ಈ ವರ್ಷಾಂತ್ಯಕ್ಕೆ ಪುನಶ್ಚೇತನ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು. ಪುನಃ ಇಡೀ ಕಾರ್ಖಾನೆಯನ್ನು ಹೊಸದಾಗಿ ಅತ್ಯಾಧುನಿಕವಾಗಿ ನಿರ್ಮಾಣ ಮಾಡಲಾಗುವುದು. ಪ್ರಧಾನಿ ನರೇಂದ್ರ ಮೋದಿ ಅವರೇ ಈ ಯೋಜನೆಗೆ ಅಡಿಗಲ್ಲು ಹಾಕಲಿದ್ದಾರೆ ಎಂದು ತಿಳಿಸಿದರು. ಇದನ್ನು ಓದಿ: ರಾಮನಗರ ಹೆಸರು ಬದಲಾವಣೆ – ತಮ್ಮ ಭೂಮಿಗಳ ಬೆಲೆ ಹೆಚ್ಚಿಸುವ ಷಡ್ಯಂತ್ರದ ಭಾಗ: ಹೆಚ್ಡಿಕೆ ಕೆಂಡ
ಇಡೀ ಕಾರ್ಖಾನೆಯನ್ನು ಹೊಸದಾಗಿ ಮರು ನಿರ್ಮಾಣ ಮಾಡಬೇಕಿದೆ. ಸುಮಾರು 8000 ದಿಂದ 10,000 ಕೋಟಿ ಹೂಡಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಈಗಾಗಲೇ ಆ ಕಾರ್ಖಾನೆ ಭಾರತೀಯ ಉಕ್ಕು ಪ್ರಾಧಿಕಾರದ ಅಧೀನದಲ್ಲಿದೆ. ಮುಂದಿನ ದಿನಗಳಲ್ಲಿ ರಾಷ್ಟ್ರದಲ್ಲಿ ಉಕ್ಕು ಕ್ಷೇತ್ರದಲ್ಲಿ ಪ್ರಾಧಿಕಾರ ಒಂದು ಲಕ್ಷ ಕೋಟಿ ಮೊತ್ತ ಹೂಡಿಕೆ ಮಾಡಲಿದೆ. ಅದೇ ಸಂದರ್ಭದಲ್ಲಿ ವಿಐಎಸ್ಎಲ್ ಕಾರ್ಖಾನೆಯನ್ನು ಕೂಡ ಪುನಶ್ಚೇತನಗೊಳಿಸಲಾಗುವುದು ಎಂದರು.
ಪ್ರಧಾನಿ ನರೇಂದ್ರ ಮೋದಿ ಅವರು 2030 ರ ಹೊತ್ತಿಗೆ ದೇಶೀಯವಾಗಿ ವಾರ್ಷಿಕ 300 ದಶಲಕ್ಷ ಟನ್ ಸ್ಟೀಲ್ ಉತ್ಪಾದನೆ ಗುರಿ ನಿಗದಿ ಮಾಡಿದ್ದು, ಅದಕ್ಕೆ ಪೂರಕವಾಗಿ ಸರ್ಕಾರಿ ಸ್ವಾಮ್ಯದಲ್ಲಿರುವ ಉಕ್ಕು ಸ್ಥಾವರಗಳನ್ನು ಬಲಪಡಿಸುವ ಕೆಲಸವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ಬ್ರಿಜೇಶ್ ಚೌಟ ಸೇರಿ ಭಾರತ ಸಂಸದರ ನಿಯೋಗ ಆಗಮಿಸುವ ಹೊತ್ತಲ್ಲೇ ಮಾಸ್ಕೋದಲ್ಲಿ ಡ್ರೋನ್ ದಾಳಿ!
ಸಾರಿಗೆ ಮಾಲಿನ್ಯ ಶೂನ್ಯ ಮಟ್ಟಕ್ಕೆ; ರಾಜ್ಯಕ್ಕೆ 4,500 ಎಲೆಕ್ಟ್ರಿಕ್ ಬಸ್
ಪ್ರಧಾನಿ ನರೇಂದ್ರ ಮೋದಿ ಅವರ ಒತ್ತಾಸೆಯಂತೆಯೇ ಕರ್ನಾಟಕಕ್ಕೆ 4,500 ಎಲೆಕ್ಟ್ರಿಕ್ ಬಸ್ಗಳನ್ನು ನೀಡಲು ನಿರ್ಧರಿಸಲಾಗಿದೆ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಕರ್ನಾಟಕದ ಮಟ್ಟಿಗೆ ದೊಡ್ಡ ತೀರ್ಮಾನ ಮಾಡಿದ್ದೇವೆ. ಪಿಎಂ ಇಡ್ರೈವ್ ಯೋಜನೆ ಅಡಿ ಬಸ್ಗಳನ್ನು ನೀಡುತ್ತಿದ್ದೇವೆ. 2030 ರ ವೇಳೆಗೆ ಭೂಸಾರಿಗೆ ಮಾಲಿನ್ಯವನ್ನು ಶೂನ್ಯಮಟ್ಟಕ್ಕೆ ಇಳಿಸಬೇಕು ಎನ್ನುವ ಉದ್ದೇಶವನ್ನು ಪ್ರಧಾನಿಗಳು ಹೊಂದಿದ್ದಾರೆ. ಅವರ ಕನಸು ಸಾಕಾರಕ್ಕೆ ನಾವು ಪ್ರಯತ್ನ ಮಾಡುತ್ತಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಜನೌಷಧ ಕೇಂದ್ರಗಳ ತೆರವು; ಕೇಂದ್ರ ಸಚಿವರ ಕಿಡಿ
ರಾಜ್ಯದ ಆಸ್ಪತ್ರೆಗಳ ಆವರಣದಲ್ಲಿ ಅತ್ಯಂತ ಕಡಿಮೆ ಬೆಲೆಗೆ ಔಷಧ ಮಾರಾಟ ಮಾಡುತ್ತಿರುವ ಜನೌಷಧ ಕೇಂದ್ರಗಳ ತೆರೆವು ಮಾಡಿಸುತ್ತಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಕ್ರಮವನ್ನು ಹೆಚ್ಡಿಕೆ ಕಟುವಾಗಿ ಟೀಕಿಸಿದ್ದಾರೆ. ಬಡವರು, ಮಧ್ಯಮ ವರ್ಗದ ಜನರಿಗೆ ಕಡಿಮೆ ಬೆಲೆಯಲ್ಲಿ ಸಿಗುತ್ತಿದ್ದ ಔಷಧಗಳನ್ನು ತಪ್ಪಿಸಿ ಯಾವುದೋ ಲಾಬಿಗೆ ಅನುಕೂಲ ಮಾಡಿಕೊಡುವ ಕುತಂತ್ರ ಇದರ ಹಿಂದೆ ಅಡಗಿರುವಂತೆ ತೋರುತ್ತಿದೆ. ಜನೌಷಧ ಮಳಿಗೆಗಳನ್ನು ತೆರವು ಮಾಡಿ ಮದ್ಯವನ್ನು ಅಥವಾ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತೀರಾ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: Delhi Election| ಆಪ್ಗಿಂತ ಮೂರು ಪಟ್ಟು ಹೆಚ್ಚು ಖರ್ಚು ಮಾಡಿತ್ತು ಕಾಂಗ್ರೆಸ್ – 68 ಮಂದಿಗೆ ಬಿಜೆಪಿಯಿಂದ ತಲಾ 25 ಲಕ್ಷ
ಇವರು ತಮ್ಮ ಗ್ಯಾರಂಟಿಗಳು ವಿಶ್ವಕ್ಕೆ ಮಾದರಿ ಎಂದು ಹೇಳಿಕೊಳ್ಳುತ್ತಾರೆ. ಆದರೆ, ಜನರ ಹತ್ತಿರಕ್ಕೆ ಹೋಗಿ ಒಮ್ಮೆ ನೋಡಲಿ. ಅಸಲಿ ಸಮಸ್ಯೆ ಏನೆಂದು ಗೊತ್ತಾಗುತ್ತದೆ. ಈ ಸರ್ಕಾರಕ್ಕೆ ನಾಚಿಕೆಯಾಗಬೇಕು. ಜನರಿಗೆ ಉಚಿತ ಮಾತ್ರೆ ಕೊಡುವ ಯೋಗ್ಯತೆ ನಿಮ್ಮ ಸರ್ಕಾರಕ್ಕೆ ಇಲ್ಲ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ಪರ ವಕೀಲ ಕಪಿಲ್ ಸಿಬಲ್ ಅವರು ವಾದ ಮಾಡಲು 1.49 ಕೋಟಿ ಹಣ ಕೊಡ್ತಾ ಇದ್ದೀರಿ. ಆ ಹಣ ಯಾರದು? ಸಿದ್ದರಾಮಯ್ಯ ಅವರ ಮನೆಯ ಹಣವಾ? ಅವರು, ಅವರ ಪತ್ನಿ ಪರವಾಗಿ ಕೋರ್ಟ್ನಲ್ಲಿ ವಾದಿಸುವುದಕ್ಕೆ ಸರ್ಕಾರ ಯಾಕೆ ಶುಲ್ಕ ನೀಡಬೇಕು ಎಂದು ಪ್ರಶ್ನಿಸಿದರು.
ಸಂಪುಟ ಸಭೆಯಲ್ಲಿ ಕೆಪಿಎಸ್ಸಿ ಬಗ್ಗೆ ನಿರ್ಧಾರ ತೆಗೆದುಕೊಂಡಿದ್ದಾರೆ. 2011ರಲ್ಲಿ ನಡೆದಿದ್ದ ನೇಮಕಾತಿ ಅಕ್ರಮದ ವಿಚಾರಣೆಯನ್ನು ಕೈಬಿಡುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ. ಇವರಿಂದ ಕೆಪಿಎಸ್ಸಿ ಸ್ವಚ್ಛ ಮಾಡಲು ಸಾಧ್ಯವೇ? ಅರ್ಕಾವತಿ ರೀಡೂ ಮಾಡಿಕೊಟ್ಟಿದ್ದಕ್ಕೆ ಪ್ರತಿಯಾಗಿ ಅಲ್ಲಿದ್ದ ವ್ಯಕ್ತಿಯನ್ನು ತಂದು ಕೆಪಿಎಸ್ಸಿಗೆ ಅಧ್ಯಕ್ಷರನ್ನಾಗಿ ಮಾಡಿದ್ದಾರೆ. ಒಂದೊಂದು ಹುದ್ದೆಗೆ ಲಕ್ಷಾಂತರ, ಕೋಟ್ಯಂತರ ರೂಪಾಯಿ ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು.
ಈಗ ಮೀಸಲಾತಿ ಅಂತ ಹೊರಟಿದ್ದೀರಿ. ಮೀಸಲಾತಿ ಕೊಟ್ಟು ಏನ್ ಮಾಡ್ತಿರಿ? ನಿಮ್ಮಿಂದ ಉದ್ಯೋಗ ಕೊಡಲು ಆಗುತ್ತಿಲ್ಲ. ಎರಡು ಲಕ್ಷಕ್ಕೂ ಹೆಚ್ಚು ಹುದ್ದೆಗಳು ಖಾಲಿ ಬಿದ್ದಿವೆ. ಎಷ್ಟು ವರ್ಷವಾಯಿತು ಖಾಲಿ ಹುದ್ದೆ ತುಂಬಿ? ಮೀಸಲಾತಿಯಿಂದ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದರು.