-9 ಬಜೆಟ್, 9 ಸೀರೆಗಳ ವಿಶೇಷತೆ ಹೀಗಿದೆ
ನವದೆಹಲಿ: 2026-27ನೇ ಹಣಕಾಸು ವರ್ಷದ ಕೇಂದ್ರ ಬಜೆಟ್ನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರಿಂದು (ಫೆ.1) ಮಂಡಿಸಲಿದ್ದಾರೆ. ಪ್ರತಿ ಬಾರಿ ಭಾರತದ ವಿವಿಧ ಪ್ರದೇಶಗಳ ಸಂಸ್ಕೃತಿಯನ್ನು ಬಿಂಬಿಸುವ ಸೀರೆಯುಡುವ ಅವರು ಈ ಬಾರಿ ತಮಿಳುನಾಡಿನ ಕಾಂಜೀವರಂ ರೇಷ್ಮೆ ಸೀರೆಯಲ್ಲಿ (Kancheevaram Silk Saree) ಮಿಂಚಿದ್ದಾರೆ.
ಈ ಬಾರಿ ನಿರ್ಮಲಾ ಸೀತಾರಾಮನ್ ಅವರು ದಾಖಲೆಯ ಒಂಬತ್ತನೇ ಬಜೆಟ್ನ್ನು ಮಂಡಿಸಲಿದ್ದಾರೆ. ಬಜೆಟ್ ವೇಳೆ ತಮಿಳುನಾಡಿನ ಪ್ರಾಚೀನ ನೇಯ್ಗೆ ಪರಂಪರೆಯನ್ನು ಗೌರವಿಸುವ ಸಲುವಾಗಿ ಕೈಯಿಂದ ನೇಯ್ದ ಕಾಂಜೀವರಂ ರೇಷ್ಮೆ ಸೀರೆಯನ್ನು ಉಟ್ಟುಕೊಂಡಿದ್ದಾರೆ. ನೇರಳೆ ಬಣ್ಣದ ಸೀರೆಯಲ್ಲಿ ಚಿನ್ನದ ಬಣ್ಣದ ಗೆರೆ ಹಾಗೂ ಕಾಫಿ ಬಣ್ಣದ ದಡಿಯನ್ನು ಹೊಂದಿರುವ ಕಾಂಜೀವರಂ ರೇಷ್ಮೆ ಸೀರೆಯನ್ನು ಆರಿಸಿಕೊಂಡಿದ್ದು, ಇದನ್ನು ತಮಿಳಿನಲ್ಲಿ `ಕಟ್ಟಂ’ ಎಂದು ಕರೆಯಲಾಗುತ್ತದೆ.
ಸೀತಾರಾಮನ್ ಅವರಿಗೆ ಸೀರೆಗಳೆಂದರೆ ಅಚ್ಚುಮೆಚ್ಚು. ಇದುವರೆಗೂ ತಾವು ಮಂಡಿಸಿದ ಬಜೆಟ್ಗಳಲ್ಲಿ ಒಂದೊಂದು ಬಗೆಯ, ಕಲಾಕುಸುರಿಯ ವಿಶೇಷತೆ ಇರುವ ಸೀರೆಗಳನ್ನುಟ್ಟು ಗಮನ ಸೆಳೆದಿದ್ದಾರೆ. ಅವರು ಧರಿಸುವ ಸೀರೆಗಳು ಕೈಮಗ್ಗ (ಕೈಯಿಂದ ನೇಯ್ದ) ಭಾರತೀಯ ಜವಳಿ ಮತ್ತು ಕರಕುಶಲ ವಸ್ತುಗಳ ಮೇಲಿನ ಅವರ ಪ್ರೀತಿಯನ್ನು ಪ್ರತಿಬಿಂಬಿಸುತ್ತವೆ. ಸೀರೆಗಳು ಭಾರತೀಯ ಸಂಸ್ಕೃತಿ, ಪರಂಪರೆ ಮೇಲೆ ಬೆಳಕು ಚೆಲ್ಲಿವೆ.
2025ರಲ್ಲಿ ಮದುಬನಿ ಕಲಾ ಸೀರೆ (ಬಿಹಾರ)
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2025ರ ಕೇಂದ್ರ ಬಜೆಟ್ನಲ್ಲಿ ಮಧುಬನಿ ಕಲೆ ಮತ್ತು ಪದ್ಮ ಪ್ರಶಸ್ತಿ ಪುರಸ್ಕೃತ ದುಲಾರಿ ದೇವಿಯ ಕೌಶಲ್ಯಕ್ಕೆ ಗೌರವಾರ್ಥವಾಗಿ ಸೀರೆ ಉಟ್ಟಿದ್ದಾರೆ. ಈ ಸೀರೆಯನ್ನು ದುಲಾರಿ ದೇವಿ ಅವರೇ ತಯಾರಿಸಿದ್ದಾರೆ. ಗೋಲ್ಡ್ ಕಲರ್ ಬಾರ್ಡರ್ ಹೊಂದಿರುವ ಸುಂದರವಾದ ಕ್ರೀಮ್ ಸೀರೆಯನ್ನು ಸಚಿವರು ಈ ಬಾರಿ ಬಜೆಟ್ ಮಂಡನೆಗೆ ಧರಿಸಿದ್ದಾರೆ. ಇದಕ್ಕೆ ಮ್ಯಾಚಿಂಗ್ ಎಂಬಂತೆ ಕೆಂಪು ಬಣ್ಣದ ಕುಪ್ಪಸವನ್ನು ಧರಿಸಿದ್ದಾರೆ.
ದುಲಾರಿ ದೇವಿ 2021ರ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು. ಮಿಥಿಲಾ ಕಲಾ ಸಂಸ್ಥೆಯಲ್ಲಿ ಕ್ರೆಡಿಟ್ ಔಟ್ರೀಚ್ ಚಟುವಟಿಕೆಗಾಗಿ ಹಣಕಾಸು ಸಚಿವರು ಮಧುಬನಿಗೆ ಹೋಗಿದ್ದರು. ಆಗ ದುಲಾರಿ ದೇವಿ ಅವರನ್ನು ಭೇಟಿಯಾದರು. ಬಿಹಾರದ ಮಧುಬನಿ ಕಲೆಯ ಬಗ್ಗೆ ಸಚಿವರಿಗೆ ತಿಳಿಸಿದ್ದಲ್ಲದೇ, ಸಚಿವರಿಗೆ ಸೀರೆಯನ್ನು ಉಡುಗೊರೆಯಾಗಿ ನೀಡಿದ್ದರು. ಬಜೆಟ್ ಮಂಡನೆ ದಿನಕ್ಕೆ ಅದನ್ನು ಧರಿಸಲು ಸಚಿವರಿಗೆ ದೇವಿ ಅವರು ಕೋರಿದ್ದರು.
2024ರಲ್ಲಿ ಮಂಗಳಗಿರಿ ಕೈಮಗ್ಗ (ಆಂಧ್ರಪ್ರದೇಶ)
2024ರಲ್ಲಿ ತಮ್ಮ ಏಳನೇ ಬಜೆಟ್ ಮಂಡಿಸಿದ್ದ ನಿರ್ಮಲಾ ಸೀತಾರಾಮನ್ ಅವರು ಮಜೆಂಟಾ (ಕೆನ್ನೇರಳೆ) ಬಾರ್ಡರ್ ಹೊಂದಿದ್ದ ಆಫ್ ವೈಟ್ ಬಣ್ಣ ಮಂಗಳಗಿರಿ ಸೀರೆ ಧರಿಸಿದ್ದರು. ಗುಂಟೂರು ಜಿಲ್ಲೆಯಲ್ಲಿ ತಯಾರಾದ ಸೀರೆ ಆಂಧ್ರಪ್ರದೇಶದ ಸಂಸ್ಕೃತಿಯನ್ನು ಬಿಂಬಿಸಿದೆ. ಇದೇ ಸಂದರ್ಭದಲ್ಲಿ ಆಂಧ್ರಕ್ಕೆ ವಿಶೇಷ ಆರ್ಥಿಕ ನೆರವು ಘೋಷಿಸಿದ್ದು ವಿಶೇಷವಾಗಿತ್ತು.
2024ರ ಮಧ್ಯಂತರ ಬಜೆಟ್ಗಾಗಿ ಟಸ್ಸರ್ ರೇಷ್ಮೆ ಸೀರೆ (ಪಶ್ಚಿಮ ಬಂಗಾಳ)
2024ರಲ್ಲೇ ಮಧ್ಯಂತರ ಬಜೆಟ್ಗಾಗಿ ಸೀತಾರಾಮನ್ ನೀಲಿ ಬಣ್ಣದ ಟಸ್ಸರ್ ರೇಷ್ಮೆ ಸೀರೆ ಉಟ್ಟಿದ್ದರು. ಅದರಲ್ಲಿ ಕಾಂತ ಕೈಯಿಂದ ಮಾಡಲಾಗಿತ್ತು. ಸೀರೆ ಜೊತೆಗೆ ಚಿನ್ನದ ಬಣ್ಣದ ಬ್ಲೌಸ್ ಧರಿಸಿದ್ದರು. ಪಶ್ಚಿಮ ಬಂಗಾಳವು ಕಾಂತ ಹೊಲಿಗೆಗೆ ಹೆಸರುವಾಸಿಯಾಗಿದೆ. ನೀಲಿ ಆರ್ಥಿಕ ಅಭಿವೃದ್ಧಿಗೆ ಒತ್ತು ನೀಡುವ, ಮೀನುಗಾರಿಕೆ ಅಭಿವೃದ್ಧಿ ಮೂಲಕ ಮತ್ಸ್ಯ ಕ್ರಾಂತಿಯ ಸಂದೇಶ ನೀಡಿದ್ದರು.
2023ರಲ್ಲಿ ಕರ್ನಾಟಕದ ಇಳಕಲ್ ಸೀರೆ
2023ರಲ್ಲಿ ಬಜೆಟ್ ಮಂಡನೆ ಸಂದರ್ಭದಲ್ಲಿ ಸಚಿವೆ ನಿರ್ಮಲಾ ಅವರು, ದೇವಾಲಯ ಬಾರ್ಡರ್ ಸೀರೆ ಆರಿಸಿಕೊಂಡಿದ್ದರು. ಕೆಂಪು ಬಣ್ಣದ ಟೆಂಪಲ್ ಬಾರ್ಡರ್ ಸೀರೆ ವಿಶೇಷವಾಗಿತ್ತು. ಕರ್ನಾಟಕ ಧಾರವಾಡದ ಇಳಕಲ್ ರೇಷ್ಮೆ ಸೀರೆ ಇದಾಗಿತ್ತು. ಕೈಯಿಂದ ನೇಯ್ದ ಕಸೂತಿ ಸೀರೆಯಿದು. ಸೀರೆಯಲ್ಲಿ ರಥ, ನವಿಲು, ಕಮಲಗಳ ಚಿತ್ರಗಳಿದ್ದವು. ಬಜೆಟ್ನಲ್ಲಿ ಕಸೂತಿ ಕಲೆಗೆ ಪ್ರೋತ್ಸಾಹ ನೀಡುವ ಸುಳಿವು ಕೊಟ್ಟಿದ್ದರು.
2022ರಲ್ಲಿ ಬೊಮ್ಕೈ ಸೀರೆ (ಒಡಿಶಾ)
2022ರಲ್ಲಿ ಬಜೆಟ್ ಮಂಡಿಸುವಾಗ ಸೀತಾರಾಮನ್ ಅವರು, ಬೊಮ್ಕೈ ಸೀರೆಯನ್ನು ಧರಿಸಿದ್ದರು. ಸೀರೆ ಕಂದು ಬಣ್ಣದ್ದಾಗಿತ್ತು. ಒಡಿಶಾದ ಗಂಜಾಂ ಜಿಲ್ಲೆಯಲ್ಲಿ ಕೈಮಗ್ಗದಲ್ಲಿ ನೇಯ್ದ ವಿಶೇಷ ಸೀರೆಯಿದು.
2021ರಲ್ಲಿ ಪೋಂಚಪಲ್ಲಿ ಸೀರೆ (ತೆಲಂಗಾಣ)
2021 ರಲ್ಲಿ ತಮ್ಮ ಮೂರನೇ ಬಜೆಟ್ ಮಂಡನೆಗಾಗಿ ನಿರ್ಮಲಾ ಸೀತಾರಾಮನ್ ಅವರು ಹೈದರಾಬಾದ್ನ ಪೋಚಂಪಲ್ಲಿ ಗ್ರಾಮದ ಕೆಂಪು ಮತ್ತು ಮಾಸಲು ಬಿಳಿ ಬಣ್ಣದ ಪೋಚಂಪಲ್ಲಿ ಸೀರೆಯನ್ನು ಧರಿಸಿದ್ದರು.
2020ರಲ್ಲಿ ರೇಷ್ಮೆ ಸೀರೆ
2020ರಲ್ಲಿ ಸೀತಾರಾಮನ್ ಅವರು ಬಜೆಟ್ ಮಂಡನೆಗೆ ಹಳದಿ ರೇಷ್ಮೆ ಸೀರೆ ಉಟ್ಟು ಬಂದಿದ್ದರು. ಸೀರೆಗೆ ಮ್ಯಾಚ್ ಆಗುವ ಅದೇ ಬಣ್ಣದ ಕುಪ್ಪಸ ಧರಿಸಿದ್ದರು. ಸೀರೆಯ ಬಾರ್ಡರ್ ನೀಲಿ ಬಣ್ಣದ್ದಾಗಿತ್ತು. ಹಳದಿ ಸಮೃದ್ಧಿಯ ಸಂಕೇತವಾಗಿದೆ.
2019ರಲ್ಲಿ ಮಂಗಳಗಿರಿ ಸೀರೆ ಆಂಧ್ರಪ್ರದೇಶ
2019 ರಲ್ಲಿ ಕೇಂದ್ರ ಹಣಕಾಸು ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಅವರ ಮೊದಲ ಬಜೆಟ್ ಮಂಡಿಸಿದ್ದರು. ಆಗ ಅವರು ಗೋಲ್ಡ್ ಕಲರ್ ಬಾರ್ಡರ್ ಹೊಂದಿರುವ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ಸಾಂಪ್ರದಾಯಿಕ `ಬಹಿ ಖಾತಾ’ ದೊಂದಿಗೆ ಬಜೆಟ್ ಬ್ರೀಫ್ಕೇಸ್ ಅನ್ನು ತೆಗೆದುಕೊಂಡು ಬಂದಿದ್ದರು. ಅದರ ಮೇಲ್ಭಾಗದಲ್ಲಿ ರಾಷ್ಟ್ರೀಯ ಲಾಂಛನದೊಂದಿಗೆ ಚಿನ್ನದ ಎಳೆಗಳು ಇದ್ದವು.
ತಮ್ಮ ಮೊದಲ ಬಜೆಟ್ ಮಂಡನೆಗಾಗಿ ಸೀತಾರಾಮನ್ ಅವರು ಚಿನ್ನದ ಗಡಿಯೊಂದಿಗೆ ಗುಲಾಬಿ ಬಣ್ಣದ ಮಂಗಳಗಿರಿ ಸೀರೆಯನ್ನು ಧರಿಸಿದ್ದರು. ವಸಾಹತುಶಾಹಿ ಬ್ರೀಫ್ಕೇಸ್ ಅನ್ನು ಸಾಂಪ್ರದಾಯಿಕ ಕೆಂಪು ಬಹಿ ಖಾತಾದೊಂದಿಗೆ ಬದಲಾಯಿಸಿದ ಕ್ಷಣವು ಸ್ಮರಣೀಯವಾಗಿತ್ತು, ಇದು ಸಾಂಸ್ಕೃತಿಕ ಮತ್ತು ರಾಜಕೀಯ ಸಂಕೇತಗಳನ್ನು ಸೂಚಿಸುತ್ತದೆ. ಪ್ರತಿ ವರ್ಷ ನಿರ್ಮಲಾ ಸೀತಾರಾಮನ್ ಆಯ್ಕೆ ಮಾಡುವ ಸೀರೆ ರಾಜಕೀಯ ವಿಶ್ಲೇಷಕರಿಗೂ ಆಸಕ್ತಿಯನ್ನುಂಟು ಮಾಡುತ್ತದೆ ಏಕೆಂದರೆ ಅದು ಸಾಮಾನ್ಯವಾಗಿ ಆಡಳಿತಾರೂಢ ಬಿಜೆಪಿಯ ಆ ವರ್ಷದ ಚುನಾವಣಾ ಮತ್ತು ರಾಜಕೀಯ ಗಮನವನ್ನು ಸೂಚಿಸುತ್ತದೆ.





