ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಕೊನೆಯ ಬಜೆಟ್ ಮಂಡನೆಗೆ ಮುಂದಾಗಿದೆ. ಲೋಕಸಭೆ ಚುನಾವಣೆ ಹೊಸ್ತಿಲಲ್ಲಿ ಬಜೆಟ್ ಮಂಡನೆಯಾಗುತ್ತಿರುವ ಕಾರಣ ಭರಪೂರ ಘೋಷಣೆ ಹೊರಬೀಳುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಿಜೆಪಿಗೆ ಹೊಡೆತ ನೀಡಿದ್ದು, ಜಂಟಿ ಅಧಿವೇಶನದಲ್ಲಿ ರಾಷ್ಟ್ರಪತಿ ಕೋವಿಂದ್ ಅವರ ಭಾಷಣವನ್ನು ಸೂಕ್ಷ್ಮವಾಗಿ ಗಮನಿಸಿದಾಗ ಬಜೆಟ್ ರೈತರು, ಬಡವರು, ಮಧ್ಯಮ ವರ್ಗದ ಪರ ಇರಲಿದೆ ಎನ್ನುವ ಸುಳಿವು ನೀಡಿದೆ.
ಹಣಕಾಸು ಸಚಿವ ಅರುಣ್ ಜೇಟ್ಲಿ ಅನಾರೋಗ್ಯದ ಕಾರಣ ರೈಲ್ವೆ ಖಾತೆ ಹೊಂದಿರುವ ಪಿಯೂಶ್ ಗೋಯಲ್ ಮೊದಲ ಬಾರಿ ಬಜೆಟ್ ಮಂಡಿಸುತ್ತಿದ್ದಾರೆ. ಸಾಮಾನ್ಯವಾಗಿ ಚುನಾವಣಾ ವರ್ಷದಲ್ಲಿ ಯಾವುದೇ ಸರ್ಕಾರ ಪೂರ್ಣ ಬಜೆಟ್ ಮಂಡಿಸದೆ, ಮಧ್ಯಂತರ ಬಜೆಟ್ ಅಥವಾ ಕೇವಲ ಲೇಖಾನುದಾನ ಮಂಡಿಸುವುದು ವಾಡಿಕೆ. ಆದರೆ, ಗೋಯಲ್ ಅವರು ಪೂರ್ಣ ಬಜೆಟ್ ಮಂಡಿಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡುತ್ತಿದ್ದಾರೆ ಎನ್ನಲಾಗಿದೆ.
ಕೃಷಿಗೆ ಏನು ಸಿಗಬಹುದು?
* ಬಜೆಟ್ನಲ್ಲಿ ಕೃಷಿ ವಲಯಕ್ಕೆ ಬಂಪರ್ ಕೊಡುಗೆ ಸಾಧ್ಯತೆ
* ಕೃಷಿ ಉಪಕರಣ, ರಸಗೊಬ್ಬರ ಖರೀದಿಗೆ ರೈತರ ಖಾತೆಗೆ ವಾರ್ಷಿಕ 10 ಸಾವಿರ ರೂ. ಜಮೆ ಸಾಧ್ಯತೆ
* ಸಕಾಲಕ್ಕೆ ಕೃಷಿ ಸಾಲ ಮರು ಪಾವತಿಸುವ ರೈತರಿಗೆ ಗಿಫ್ಟ್ ನಿರೀಕ್ಷೆ
* ಪೂರ್ಣ ಬಡ್ಡಿ ಮನ್ನಾ ಸಾಧ್ಯತೆ
* ತೆಲಂಗಾಣ ಮಾದರಿಯಲ್ಲಿ ರೈತರ ಬ್ಯಾಂಕ್ ಖಾತೆಗೆ ನೇರ ನಗದು ವರ್ಗಾವಣೆ?
* ಕೃಷಿ ವಿಮೆ ಪ್ರೀಮಿಯಂ ಪೂರ್ಣವಾಗಿ ಸರ್ಕಾರದಿಂದಲೇ ಪಾವತಿ
* ಸಾಮಾನ್ಯ ಕನಿಷ್ಠ ಬೆಂಬಲ ಬೆಲೆ ಘೋಷಣೆ ಸಾಧ್ಯತೆ
* ಗ್ರಾಮೀಣ ಪ್ರದೇಶಗಳ ಅಭಿವೃದ್ಧಿ ಗೆ ಹೆಚ್ಚಿನ ಅನುದಾನ
* ನರೇಗಾದ ಮೂಲಕ ಗ್ರಾಮೀಣ ಭಾಗದ ನೌಕರರ ಕೂಲಿ ಹೆಚ್ಚಿಸಬಹುದು
ತೆರಿಗೆ ಪಾವತಿದಾರರಿಗೆ ಏನು ಸಿಗಬಹುದು?
* ಆದಾಯ ತೆರಿಗೆ ಮಿತಿ 2.5 ಲಕ್ಷದಿಂದ ಏರಿಕೆ
* ಆದಾಯ ತೆರಿಗೆ ಸಲ್ಲಿಕೆ ನಿಯಮಗಳನ್ನು ಕೊಂಚ ಸಡಿಸಬಹುದು
* ಟಿಡಿಎಸ್ ಸಲ್ಲಿಕೆ ದಿನವೇ ಮರು ಪಾವತಿಗೆ ನಿಯಮ ಜಾರಿಗೊಳಿಸಬಹುದು
* ಶೇ.30ರಷ್ಟಿರುವ ಕಾರ್ಪೋರೇಟ್ ತೆರಿಗೆಯನ್ನು ಶೇ.25ಕ್ಕೆ ಇಳಿಕೆ ಮಾಡಬಹುದು
ಶ್ರೀಸಾಮಾನ್ಯರಿಗೆ ಏನು ಸಿಗಬಹುದು?
* ಮೆಡಿಕಲ್ ವಿಮೆ ಕಡಿಮೆ ಮಾಡುವ ನಿರೀಕ್ಷೆ
* ಪ್ರತಿ ವ್ಯಕ್ತಿಗೂ 5 ಲಕ್ಷದ ವರೆಗಿನ ಏಕರೂಪದ ವಿಮೆ ಭಾಗ್ಯ ಕಲ್ಪಿಸಬಹುದು
* ಸಣ್ಣ ಉದ್ದಿಮೆದಾರರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸಾಧ್ಯತೆ (ಉದ್ದಿಮೆದಾರರಿಗೆ ವಿಮೆಯೂ ಘೋಷಣೆ ಮಾಡಬಹುದು)
* ಬಡವರಿಗೆ ಕನಿಷ್ಠ ವರಮಾನ ಯೋಜನೆ ಪ್ರಕಟಣೆ ಸಾಧ್ಯತೆ
* ಜಿಎಸ್ಟಿ ವ್ಯಾಪ್ತಿಯಿಂದ ಮತ್ತಷ್ಟು ವಸ್ತುಗಳನ್ನು ಕೈ ಬಿಡುವ ಸಾಧ್ಯತೆ
* ಐಟಿ ಕಾನೂನುಗಳಿಗೆ ಬದಲಾವಣೆ ತಂದು ಉದ್ಯೋಗ ಸೃಷ್ಟಿಸಬಹುದು