ಬೆಂಗಳೂರು: ಮದುವೆ ಮಾಡಿಕೊಳ್ಳಲು ಒಪ್ಪದ ಮುಂಬೈನ 33 ವರ್ಷ ವಯಸ್ಸಿನ ವಿಧವೆಯ ಹೊಟ್ಟೆ, ಕಿವಿ, ಕೆನ್ನೆ ಹಾಗೂ ಭುಜಕ್ಕೆ 36 ವರ್ಷದ ನಿರುದ್ಯೋಗಿ ಲೋಹಿತ್ ಎಂಬಾತ ಚಾಕುವಿನಿಂದ ಹಲವು ಬಾರಿ ಇರಿದ ಭಯಾನಕ ಘಟನೆಯೊಂದು ನಡೆದಿದೆ.
ಈ ಘಟನೆ ದಕ್ಷಿಣ ಬೆಂಗಳೂರಿನಲ್ಲಿ ನಡೆದಿದೆ. ಮಹಿಳೆ ಮತ್ತು ಆರೋಪಿ ಲೋಹಿತ್ ಮ್ಯಾಟ್ರಿಮೋನಿಯಲ್ಲಿ ಪರಿಚಯವಾಗಿದ್ದರು.
ಘಟನೆ ವಿವರ: ನಗರದ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿರೋ ಮಹಿಳೆಯ ಪತಿ ಎರಡು ವರ್ಷದ ಹಿಂದೆ ತೀರಿಕೊಂಡಿದ್ದು, ಈಕೆ 7 ಮತ್ತು 4 ವರ್ಷ ವಯಸ್ಸಿನ ಇಬ್ಬರು ಹೆಣ್ಣು ಮಕ್ಕಳೊಂದಿಗೆ ಜೀವನ ನಡೆಸುತ್ತಿದ್ದರು. ಹೀಗಾಗಿ ಮರುಮದುವೆಯಾಬೇಕು ಎನ್ನುವ ನಿಟ್ಟಿನಲ್ಲಿ ಮಹಿಳೆ ಪ್ರಸಿದ್ಧ ಜಾತಲತಾಣ ಮ್ಯಾಟ್ರಿಮೋನಿಯಲ್ಲಿ ಫೋಟೋವೊಂದನ್ನು ಹಾಕಿದ್ದರು.
ಇದನ್ನೂ ಓದಿ: ಮನೆ ಮುಂದೆ ಮಲಗಿದ್ದ ಮಹಿಳೆಯ ಮೇಲೆ ಗ್ಯಾಂಗ್ ರೇಪ್-ಸಿಸಿಟಿವಿಯಲ್ಲಿ ಸೆರೆಯಾಯ್ತು ಭಯಂಕರ ದೃಶ್ಯ
ಬಳಿಕ ಲೋಹಿತ್ ಮಹಿಳೆಗೆ ಕರೆ ಮಾಡಿ ಮದುವೆ ಮಾಡಿಕೊಳ್ಳುವ ವಿಚಾರವನ್ನು ತಿಳಿಸಿದ್ದಾನೆ. ಅಲ್ಲದೇ ಅವರಿಬ್ಬರ ಮಧ್ಯೆ ಮೆಸೇಜ್ ಗಳು ಆರಂಭವಾಗಿದ್ದವು. ಕೆಲ ದಿನಗಳ ಹಿಂದೆ ಮಹಿಳೆ ನಗರದಲ್ಲಿದ್ದ ಲೋಹಿತ್ ಮನೆಗೆ ಭೇಟಿ ನೀಡುವ ಇಂಗಿತ ವ್ಯಕ್ತಪಡಿಸಿದ್ದರು. ಹೀಗೆ ಮನೆಗೆ ಬಂದಿದ್ದ ಮಹಿಳೆಯನ್ನು ಮದುವೆ ಮಾಡಿಕೊಳ್ಳುವಂತೆ ಆರೋಪಿ ಪೀಡಿಸಿದ್ದಾನೆ. ಆದ್ರೆ ಮಹಿಳೆ ಈ ವಿಚಾರದಿಂದ ಹಿಂದೆ ಸರಿದಿದ್ರು. ಇದರಿಂದ ಸಿಟ್ಟುಗೊಂಡ ಆರೋಪಿ ಆಕೆಗೆ ಹಲವು ಬಾರಿ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಮಹಿಳೆಯನ್ನು ನಗರ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಅಂತ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಫ್ಲ್ಯಾಟ್ ನಲ್ಲಿ ತಾಯಿ,ಮಗಳ ಶವ ಪತ್ತೆ- 1.17 ಲಕ್ಷ ರೂ. ಮೌಲ್ಯದ ಚಿನ್ನಾಭರಣ ನಾಪತ್ತೆ
`ನಾನು ಅಕ್ಟೋಬರ್ 19ರಂದು ಬೆಂಗಳೂರಿಗೆ ಬಂದಿದ್ದು, ಲೋಹಿತ್ ಮನೆಗೆ ಹೋಗಿದ್ದೆ. ಲೋಹಿತ ತನ್ನ ತಾಯಿ ಜೊತೆ ವಾಸಿಸುತ್ತಿದ್ದು, ನಿರುದ್ಯೋಗಿಯಾಗಿದ್ದನೆಂದು ನನಗೆ ತಿಳಿದುಬಂದಿತ್ತು. ಆತನಿಗೆ ಮೊದಲು ಮದುವೆಯಾಗಿತ್ತು. ಆತನ ಗುಣ ಚೆನ್ನಾಗಿಲ್ಲ. ಅಲ್ಲದೇ ದುಡಿಯಲ್ಲ. ಮನೆಯ ಖರ್ಚಿಗೆ ಹಣ ಸಂಪಾದನೆ ಮಾಡಲ್ಲ ಎಂಬ ಕಾರಣಕ್ಕೆ ಪತ್ನಿ ದೂರ ಉಳಿದಿದ್ದಾಳೆ ಅಂತ ಆತನ ಮನೆ ಪಕ್ಕದವರು ನನ್ನ ಬಳಿ ಹೇಳಿದ್ದರು. ಈ ಎಲ್ಲಾ ಕಾರಣಗಳಿಂದ ನಾನು ಆತನನ್ನು ಮದುವೆ ಮಾಡಿಕೊಳ್ಳಲು ಒಪ್ಪಲಿಲ್ಲ. ಹೀಗಾಗಿ ತನ್ನ ಮನೆ ಮುಂಬೈಗೆ ತೆರಳಲೆಂದು ನವೆಂಬರ್ 4 ರಂದು ಟಿಕೆಟ್ ಬುಕ್ ಮಾಡಿದ್ದೆ ಅಂತ ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.
ಅಂತೆಯೇ ಶುಕ್ರವಾರ ಮುಂಬೈಗೆ ತೆರಳಲೆಂದು ತಾನು ಬ್ಯಾಗ್ ಪ್ಯಾಕ್ ಮಾಡುತ್ತಿದೆ. ಈ ವೇಳೆ ಆರೋಪಿ ನನ್ನನ್ನು ತಡೆದಿದ್ದಾನೆ. ಅಲ್ಲದೇ ನನ್ನ ಮದುವೆಯಾಗದಿದ್ದರೆ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದು, ಒಳಗಿನಿಂದ ಚಾಕು ತೆಗೆದುಕೊಂಡು ಬಂದು ಮೊದಲು ಹೊಟ್ಟೆಗೆ ಇರಿದಿದ್ದಾನೆ. ಈ ವೇಳೆ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಕೈ, ಬಲದ ಕಿವಿ, ಎಡಗಡೆಯ ಕೆನ್ನೆ ಹಾಗೂ ಭುಜಕ್ಕೆ ಹೀಗೆ ಆತನ ತಾಯಿ ಬಂದು ನನ್ನನ್ನು ರಕ್ಷಿಸುವವರೆಗೂ ಹಲವು ಬಾರಿ ಇರಿದಿದ್ದಾನೆ ಅಂತ ಮಹಿಳೆ ವಿವರಿಸಿದ್ದಾರೆ.
ಇದನ್ನೂ ಓದಿ: ಇನ್ಶುರೆನ್ಸ್ ಪಾಲಿಸಿ ಮಾಡಿಸಲು ಹೋದ ಹೊಸ ಗೆಳತಿಯ ಮನೆಯಲ್ಲಿಯೇ ಮಹಿಳೆ ಹೆಣವಾದ್ಳು!
ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವೇಶ್ವರಪುರಂ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿದೆ.