ಮಂಡ್ಯ: ವಿಚಾರಣಾಧೀನ ಕೈದಿಯೊಬ್ಬ ಜೈಲಿನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯದಲ್ಲಿ ನಡೆದಿದೆ.
ರಾಘವೇಂದ್ರ (33) ಆತ್ಮಹತ್ಯೆಗೆ ಶರಣಾದ ಕೈದಿ. ಸರಗಳ್ಳತನದ ಆರೋಪದಲ್ಲಿ ರಾಘವೇಂದ್ರ ಕಳೆದ ಮೂರುವರೆ ತಿಂಗಳ ಹಿಂದೆಯೇ ಜೈಲು ಸೇರಿದ್ದ. ಆದರೆ ಅಂದಿನಿಂದ ಇಂದಿನವರೆಗೂ ರಾಘವೇಂದ್ರನನ್ನ ನೋಡಲು ಅವರ ಮನೆಯವರು ಯಾರೂ ಬಂದಿರಲಿಲ್ಲ.
ರಾಘವೇಂದ್ರನಿಗೆ ಜಾಮೀನು ಕೊಡಿಸಲೂ ಕುಟುಂಬದವರೂ ಪ್ರಯತ್ನಿಸಿರಲಿಲ್ಲ. ಹೀಗಾಗಿ ಕೈದಿ ರಾಘವೇಂದ್ರ ಮನನೊಂದಿದ್ದು ಗುರುವಾರ ಮಧ್ಯರಾತ್ರಿ ಎಲ್ಲರೂ ಮಲಗಿರುವ ವೇಳೆ ಜೈಲಿನ ಕಿಟಕಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ತನಗೆ ಹೊದ್ದುಕೊಂಡು ಮಲಗಲು ಕೊಟ್ಟಿದ್ದ ಹೊದಿಕೆಯನ್ನೇ ನೇಣಿಗೆ ಕುಣಿಕೆ ಮಾಡಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಈ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಮಂಡ್ಯ ಎಸ್ಪಿ ರಾಧಿಕಾ ಜೈಲು ಅಧಿಕಾರಿಯಿಂದ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಾಹಿತಿ ಪಡೆದಿದ್ದಾರೆ. ಈ ಸಂಬಂಧ ಮಂಡ್ಯ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.