ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಅವರ ಪ್ರಮಾಣವಚನ ಸಮಾರಂಭಕ್ಕೆ ಕೆಲವೇ ಗಂಟೆ ಬಾಕಿ ಇದೆ. ಆದರೆ ಇತ್ತ ರಮೇಶ್ ಜಾರಕಿಹೊಳಿಗಾಗಿ ಸಚಿವ ಸ್ಥಾನ ತ್ಯಾಗಕ್ಕೆ ಬಿಜೆಪಿ ಶಾಸಕ ಉಮೇಶ್ ಕತ್ತಿ ಮುಂದಾಗಿದ್ದಾರ ಎಂಬ ಮಾತುಗಳು ಕೇಳಿಬರುತ್ತಿದೆ.
ರಮೇಶ್ ಜಾರಕಿಹೊಳಿ ಪಕ್ಷಕ್ಕೆ ಬಂದು ಡಿಸಿಎಂ ಸ್ಥಾನ ಕೇಳಿದರೂ ಕೊಡುವುದಕ್ಕೆ ಸಿದ್ಧ. ನನ್ನ ರಮೇಶ್ ಜಾರಕಿಹೊಳಿ ಮಧ್ಯೆ ಯಾವುದೇ ಕಿತ್ತಾಟವಿಲ್ಲ. ಚುನಾವಣೆ ಬಂದಾಗ ಮಾತ್ರ ನಾವು ಎದುರಾಗುತ್ತಿದ್ವಿ. ಹೊರಗಿನಿಂದ ಪಕ್ಷಕ್ಕೆ ಬರುವವರಿಗೆ ಸಚಿವ ಸ್ಥಾನ ಬಿಟ್ಟು ಕೊಡಲು ಸಿದ್ಧ ಎಂದು ಉಮೇಶ್ ಕತ್ತಿ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಉಮೇಶ್ ಕತ್ತಿ ಅವರು, ನಾನು ಸಚಿವ ಸ್ಥಾನದ ಆಕಾಂಕ್ಷಿ. ಆದರೆ ರಾಜ್ಯದಲ್ಲಿ ಯಡಿಯೂರಪ್ಪ ನೇತೃತ್ವದ ಹೊಸ ಸರ್ಕಾರ ಬರುತ್ತಿದೆ. ನಾಲ್ಕು ವರ್ಷಗಳ ಕಾಲ ರಾಜ್ಯದಲ್ಲಿ ಉತ್ತಮ ಆಡಳಿತವನ್ನು ಕೊಡುವುದೇ ನಮ್ಮ ಗುರಿಯಾಗಿದೆ. ನಾವು ಮೊದಲಿಂದಲೂ ಸ್ಥಾನ ತ್ಯಾಗ ಮಾಡುತ್ತಾ ಬಂದಿದ್ದೇವೆ. ಈಗ ಹೊರಗಿನಿಂದ ಬಂದವರಿಗೆ ಸ್ಥಾನ ಕೊಡಲು ಸಿದ್ಧರಿದ್ದೇವೆ. ರಮೇಶ್ ಜಾರಕಿಹೊಳಿ ಬಂದರೂ ಸ್ವಾಗತ, ಕುಮಾರಸ್ವಾಮಿ, ಸಿದ್ದರಾಮಯ್ಯ ಬಂದರೂ ಸ್ವಾಗತ ಎಂದಿದ್ದಾರೆ.
ರಮೇಶ್ ಜಾರಕಿಹೊಳಿ ಮತ್ತು ನಮ್ಮ ಜಗಳ ಕುಟುಂಬ ಜಗಳ ಅಲ್ಲ. ಚುನಾವಣೆ ಬಂದಾಗ ಮಾತ್ರ ನಾವು ಎದುರಾಗಿ ನಿಲ್ಲುತ್ತಿದ್ದೆವು. ರಮೇಶ್ ಅವರು ನನ್ನ ಮಿತ್ರರು. ನಮ್ಮ ಪಕ್ಷಕ್ಕೆ ಬಂದರೆ ಅವರು ಮಂತ್ರಿಯಾಗುತ್ತಾರೆ. ನಮ್ಮ ಪಕ್ಷದ ನಾಯಕರು ಮಂತ್ರಿಯಾಗುತ್ತಾರೆ. ರಮೇಶ್ ಡಿಸಿಎಂ ಹುದ್ದೆ ಕೇಳಿದರೂ ಕೊಡುತ್ತೀವಿ. ಒಟ್ಟಿನಲ್ಲಿ ಎಲ್ಲರೂ ಒಟ್ಟಾಗಿ ಕೂಡಿಕೊಂಡು ರಾಜ್ಯದಲ್ಲಿ ಆಡಳಿತ ನಡೆಸಬೇಕು ಎಂದು ಉಮೇಶ್ ಕತ್ತಿ ಹೇಳಿದ್ದಾರೆ.