ಮಂಗಳೂರು: ಯುವಜನತೆಯಲ್ಲಿ ಇಚ್ಛಾಶಕ್ತಿ ಮತ್ತು ಸಾಧಿಸುವ ಛಲ ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಒಂದು ಕಾಲದಲ್ಲಿ ಮಕ್ಕಳ ಕೊರತೆಯಿದ್ದ ಕರಂಬಾರು ಸರಕಾರಿ ಶಾಲೆಯಲ್ಲಿ ಈಗ ಮಕ್ಕಳ ಸಂಖ್ಯೆ ಹೆಚ್ಚಳ ಕಂಡಿದೆ. ಊರ ದಾನಿಗಳ ಹಾಗೂ ಶಿಕ್ಷಣ ಪ್ರೇಮಿಗಳ ನೆರವಿನಿಂದ ಇಲ್ಲಿ 1.34 ಕೋಟಿ ರೂ. ವೆಚ್ಚದಲ್ಲಿ ನೂತನ ಶಾಲಾ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಗಿದೆ.
ಶಾಲೆಯ ಅಭಿವೃದ್ಧಿಗೆ ಅವಿರತ ಶ್ರಮಿಸುವ ಹಳೆ ವಿದ್ಯಾರ್ಥಿ ಸಂಘ ಎನ್ನುವ ಯುವಶಕ್ತಿಯೇ ಪ್ರೇರಣೆಯಾಗಿದೆ” ಎಂದು ಮೂಲ್ಕಿ
ಮೂಡಬಿದ್ರೆ ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಅಭಿಪ್ರಾಯಪಟ್ಟರು. ಅವರು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ ಕರಂಬಾರು ಇದರ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಮಾತಾಡುತ್ತಿದ್ದರು.
ಬಳಿಕ ಮಾತಾಡಿದ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ ಅವರು, ಶಾಲೆಯ ಹಿಂದಿನ ಮುಖ್ಯ ಶಿಕ್ಷಕಿಯಾಗಿದ್ದ ಚಂದ್ರಕಲಾ ಅವರ ಆಶಯದಂತೆ ನಾವು ಹಳೆ ವಿದ್ಯಾರ್ಥಿ ಸಂಘವನ್ನು ಕಟ್ಟಿದಾಗ ಇಲ್ಲಿ ಶಿಕ್ಷಣ ಪಡೆಡಿರುವ ಅನೇಕ ಮಂದಿ ನಮಗೆ ಬೆಂಬಲವಾಗಿ ನಿಂತರು. ಅವರೆಲ್ಲರ ಸಹಕಾರದಿಂದ ಇಲ್ಲಿ ಹತ್ತಾರು ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಸಾಧ್ಯವಾಯಿತು. ಇಲ್ಲಿನ ಮಕ್ಕಳಿಗೆ ಸುಸಜ್ಜಿತ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಿದರೆ ಹೇಗೆ ಎಂದು ನಮ್ಮಲ್ಲಿ ಹುಟ್ಟಿಕೊಂಡ ಕನಸು ಇಂದು ಇಲ್ಲಿಯವರೆಗೆ ಬಂದು ನಿಂತಿದೆ. ಆತ್ಮಸ್ಥೈರ್ಯ ನಮ್ಮಲ್ಲಿದ್ದರೆ ಎಂತ ಸಾಧನೆ ಬೇಕಾದರೂ ಮಾಡಬಹುದು. ಶಾಸಕರು ಸದಾ ಬೆನ್ನು ತಟ್ಟಿ ಪ್ರೋತ್ಸಾಹ ನೀಡುತ್ತಿದ್ದಾರೆ. ಈ ಪುಣ್ಯಕಾರ್ಯದಲ್ಲಿ ಕೈಜೋಡಿಸಿದ ಎಲ್ಲರಿಗೂ ನಾನು ಚುರಋಣಿ ಎಂದರು. ಇದನ್ನೂ ಓದಿ: ಕೋಮುದ್ವೇಷ ಕಕ್ಕುವುದು, ನನ್ನ ಹೆಸರು ಎಳೆದು ತರುವುದು ಸಿಟಿ ರವಿಗೆ ಮಾನಸಿಕ ರೋಗವಾಗಿದೆ: ಸಿದ್ದರಾಮಯ್ಯ
ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯ ಅಧಿಕಾರಿ ಪೂರ್ಣಕಲಾ ವೈ.ಕೆ. ಮಾತಾಡುತ್ತಾ, ಕರಂಬಾರು ಶಾಲೆಯ ಹಳೆ ವಿದ್ಯಾರ್ಥಿಗಳು ಸೇರಿಕೊಂಡು ತಮ್ಮ ಊರಿನ ಶಾಲೆಗೆ ನೂತನ ಕಟ್ಟಡ ಕಟ್ಟಿಕೊಡಲು ಶ್ರಮಿಸುತ್ತಿರುವುದು ಅಭಿನಂದನೀಯ ಎಂದರು.
ಬಳಿಕ ಮಾತಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜಾ ಅವರು, ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿರುವ ಈ ವೇಳೆಯಲ್ಲಿ ಕರಂಬಾರು ಶಾಲೆಯ ಹಳೆ ವಿದ್ಯಾರ್ಥಿಗಳು, ಊರ ದಾನಿಗಳು ಸೇರಿಕೊಂಡು ಇಲ್ಲಿ ಪೂರ್ವ ಪ್ರಾಥಮಿಕ ಶಾಲೆ ಆರಂಭಿಸಿದರು. ಎಲ್ ಕೆಜಿ, ಯುಕೆಜಿ ತರಗತಿಗೆ ಒಳ್ಳೆಯ ಬೆಂಬಲ ಸಿಕ್ಕಿದ್ದು ಇಂದು ಮಕ್ಕಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ಸರಕಾರ, ಹಳೆ ವಿದ್ಯಾರ್ಥಿ ಸಂಘ, ಊರಿನ ದಾನಿಗಳು ಹಾಗೂ ಸಿಎಸ್ ಆರ್ ಫಂಡ್ ನೆರವಿನಿಂದ ಸುಸಜ್ಜಿತ ಶಾಲಾ ತರಗತಿ ನಿರ್ಮಿಸಲು ಮುಂದಾಗಿರುವುದು ಶ್ಲಾಘನೀಯ. ಕರಂಬಾರು ಸರಕಾರಿ ಶಾಲೆ ಯಾವ ಖಾಸಗಿ ಶಾಲೆಗಳಲ್ಲಿನ ಶಿಕ್ಷಣಕ್ಕಿಂತಲೂ ಕಡಿಮೆಯಾಗದೆ ಇಲ್ಲಿ ಕಲಿತ ಮಕ್ಕಳು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ರೂಪುಗೊಳ್ಳಲಿ” ಎಂದು ಶುಭ ಹಾರೈಸಿದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸತೀಶ್ ದೇವಾಡಿಗ, ಬಜ್ಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ.ಕೆ., ಕ್ಷೇತ್ರ ಶಿಕ್ಷಣಾಧಿಕಾರಿ ಸದಾನಂದ ಪೂಂಜಾ ಎ.ವಿ., ಪಿ.ಟಿ. ಕೃಷ್ಣಪ್ಪ, ಎಸ್.ಡಿ.ಎಂ.ಸಿ. ಅಧ್ಯಕ್ಷ ರಾಘವೇಂದ್ರ, ಕದ್ರಿ ಮಂಜುನಾಥ ದೇವಸ್ಥಾನದ ಮೊಕ್ತೇಸರ ಹೆಚ್. ಕೆ. ಪುರುಷೋತ್ತಮ, ಮಳವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ, ಕರಂಬಾರು ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಜಗನ್ನಾಥ ಸಾಲಿಯಾನ್, ಉದ್ಯಮಿ ಕೃಷ್ಣ ಕಲ್ಲೋಡಿ, ವಿಶ್ವನಾಥ್, ಹಳೆ ವಿದ್ಯಾರ್ಥಿ ಸಂಘದ ಉಪಾಧ್ಯಕ್ಷ ರಾಕೇಶ್ ಕುಂದರ್, ಪ್ರಧಾನ ಕಾರ್ಯದರ್ಶಿ ನವೀನ್ ಚಂದ್ರ ಸಾಲಿಯಾನ್, ಶಾಲೆಯ ಮುಖ್ಯ ಶಿಕ್ಷಕಿ ಉಶಾಕಿರಣ, ಇಬ್ರಾಹಿಂ ಬ್ಯಾರಿ, ಗುತ್ತಿಗೆದಾರ ಮುಹಮ್ಮದ್ ರಫೀಕ್ ಮತ್ತಿತರರು ಉಪಸ್ಥಿತರಿದ್ದರು.