ಕಾರವಾರ: ಉಕ್ರೇನ್ನ ಖಾರ್ಕಿವ್ನಲ್ಲಿ ಸಿಲುಕಿದ್ದ ಉತ್ತರಕನ್ನಡ ಜಿಲ್ಲೆಯ ಮುಂಡಗೋಡಿನ ಸ್ನೇಹಾ ಹೊಸಮನಿ ಇಂದು ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ದೆಹಲಿ ಕರ್ನಾಟಕ ಭವನಕ್ಕೆ ತೆರಳಿದ್ದಾರೆ.
ಸ್ನೇಹಾರೊಂದಿಗೆ 15ಕ್ಕೂ ಅಧಿಕ ಮಂದಿ ಕನ್ನಡಿಗರು ದೆಹಲಿಗೆ ಆಗಮಿಸಿದ್ದು, ಇಂದು ದೆಹಲಿಯಿಂದ ಬೆಂಗಳೂರಿಗೆ ತೆರಳಿ ಭಾನುವಾರ ಊರಿಗೆ ಮರಳಲಿದ್ದಾರೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಸ್ನೇಹಾ ಅವರು ಉಕ್ರೆನ್ನ ಖಾರ್ಕಿವ್ನಲ್ಲಿ ನಾಲ್ಕನೇ ವರ್ಷದ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದು, ಉಕ್ರೇನ್ನ ಖಾರ್ಕಿವ್ನಲ್ಲಿ ಸಿಲುಕಿಕೊಂಡಿದ್ದರು. ಕೇಂದ್ರ ಗೃಹ ಇಲಾಖೆ ಹಾಗೂ ಉಕ್ರೇನ್ ಭಾರತೀಯ ರಾಯಭಾರಿ ಕಚೇರಿ ಸೂಚನೆಯಂತೆ ರುಮೇನಿಯಾಕ್ಕೆ ತನ್ನ ಸ್ನೇಹಿತರೊಂದಿಗೆ ಪ್ರಯಾಣ ಬೆಳಸಿದ್ದರು. ರುಮೇನಿಯಾ ಗಡಿಯಿಂದ ಭಾರತಕ್ಕೆ ಮರಳಿರುವ ಅವರು ಭಾನುವಾರ ಮನೆಗೆ ತೆರಳಲಿದ್ದಾರೆ. ಇದನ್ನೂ ಓದಿ: ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡೇಟು- ಆಸ್ಪತ್ರೆಗೆ ದಾಖಲು
ಕಳೆದ ಒಂದು ವಾರದಿಂದ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸುತ್ತಿದೆ. ಅದರಲ್ಲೂ ಉಕ್ರೇನ್ನ ಪ್ರಮುಖ ನಗರಗಳಾದ ಕೀವ್ ಮತ್ತು ಖಾರ್ಕಿವ್ ದಾಳಿಗೆ ತತ್ತರಿಸಿಹೋಗಿದೆ. ಅಲ್ಲಿನ ಭಾರತೀಯ ವಿದ್ಯಾರ್ಥಿಗಳು ಪ್ರಸ್ತುತ ಯುದ್ಧ ಪೀಡಿತ ದೇಶ ಉಕ್ರೇನ್ನಿಂದ ಪಲಾಯನ ಮಾಡುತ್ತಿದ್ದಾರೆ. ಭಾರತಕ್ಕೆ ಸುರಕ್ಷಿತವಾಗಿ ಮರಳಲು ಪೋಲೆಂಡ್ನ ಗಡಿಯನ್ನು ತಲುಪಲು ಪ್ರಯತ್ನಿಸುತ್ತಿದ್ದಾರೆ. ಕೇಂದ್ರ ಸಚಿವರಾದ ಹರ್ದೀಪ್ ಸಿಂಗ್ ಪುರಿ, ಜ್ಯೋತಿರಾದಿತ್ಯ ಎಂ ಸಿಂಧಿಯಾ, ಕಿರಣ್ ರಿಜಿಜು ಮತ್ತು ಜನರಲ್ (ನಿವೃತ್ತ) ವಿಕೆ ಸಿಂಗ್ ಉಕ್ರೇನ್ಗೆ ಹೊಂದಿಕೊಂಡಿರುವ ದೇಶಗಳಲ್ಲಿರುವ ಭಾರತೀಯರನ್ನು ಸ್ಥಳಾಂತರಿಸುವ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಇದನ್ನೂ ಓದಿ: ನಾನೇನು ಕಚ್ಚುವುದಿಲ್ಲ, ಮತ್ತೇಕೆ ನಿಮಗೆ ಭಯ? – ಪುಟೀನ್ಗೆ ವ್ಯಂಗ್ಯ ಮಾಡಿದ ಉಕ್ರೇನ್ ಅಧ್ಯಕ್ಷ