ಲಂಡನ್: ಇಂಗ್ಲೆಂಡ್ (England) ಪ್ರಧಾನ ಮಂತ್ರಿ ಕೀರ್ ಸ್ಟಾರ್ಮರ್ (Keir Starmer) ಅವರ ಕಚೇರಿ ಶುಕ್ರವಾರ ಆಯೋಜಿಸಿದ್ದ ದೀಪಾವಳಿ (Deepavali) ಆಚರಣೆಯ ಔತಣಕೂಟದಲ್ಲಿ ಮಾಂಸಹಾರ ಹಾಗೂ ಮದ್ಯ ನೀಡಿದ್ದಕ್ಕಾಗಿ ಕ್ಷಮೆ ಯಾಚಿಸಿದೆ. ಭವಿಷ್ಯದಲ್ಲಿ ಇದು ಪುನರಾವರ್ತನೆಯಾಗುವುದಿಲ್ಲ ಎಂದು ಕಚೇರಿಯ ವಕ್ತಾರರು ತಿಳಿಸಿದ್ದಾರೆ.
ಪ್ರಧಾನಮಂತ್ರಿಯವರ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಕೆಲವು ಬ್ರಿಟಿಷ್ ಹಿಂದೂಗಳು ಮಾಂಸಾಹಾರ ಆಹಾರ ಮತ್ತು ಮದ್ಯ ನೀಡುವುದನ್ನು ವಿರೋಧಿಸಿದ್ದರು. ಅಲ್ಲದೇ ಇದು ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಬ್ರಿಟಿಷ್ ಹಿಂದೂ, ಸಿಖ್ ಮತ್ತು ಜೈನ ಸಮುದಾಯಗಳು ನಮ್ಮ ದೇಶಕ್ಕೆ ನೀಡುತ್ತಿರುವ ಕೊಡುಗೆಗಾಗಿ ದೀಪಾವಳಿ ಔತಣಕೂಟ ಆಯೋಜಿಸಲಾಗಿತ್ತು. ಆದರೆ ಕಾರ್ಯಕ್ರಮದ ಆಯೋಜನೆಯಲ್ಲಿ ತಪ್ಪಾಗಿದೆ. ಅದಕ್ಕಾಗಿ ನಾವು ವಿಷಾಧಿಸುತ್ತೇವೆ. ಸಮುದಾಯದ ಭಾವನೆಗಳನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಈ ರೀತಿಯ ತಪ್ಪು ಮತ್ತೆ ಮರುಕಳಿಸುವುದಿಲ್ಲ ಎಂದು ವಕ್ತಾರರು ತಿಳಿಸಿದ್ದಾರೆ.
ಈ ಪಾರ್ಟಿಯಲ್ಲಿ ಸಮುದಾಯದ ಮುಖಂಡರು ಮತ್ತು ಉನ್ನತ ರಾಜಕಾರಣಿಗಳು ಭಾಗವಹಿಸಿದ್ದರು. ದೀಪಾಲಂಕಾರದ ದೀಪಗಳು, ಕೂಚಿಪುಡಿ ನೃತ್ಯ ಪ್ರದರ್ಶನ ಮತ್ತು ಸ್ಟಾರ್ಮರ್ ಅವರ ಭಾಷಣವನ್ನು ಸಮಾರಂಭ ಒಳಗೊಂಡಿತ್ತು.
ಕಳೆದ ವರ್ಷ ರಿಷಿ ಸುನಕ್ ದೀಪಾವಳಿ ಹಬ್ಬ ಆಚರಣೆ ಸಂದರ್ಭದಲ್ಲಿ ಊಟದ ಮೆನುವಿನಲ್ಲಿ ಮಾಂಸ ಮತ್ತು ಮದ್ಯ ಇರಲಿಲ್ಲ. ಪ್ರಮುಖ ಬ್ರಿಟಿಷ್ ಹಿಂದೂ ಪಂಡಿತರಾದ ಸತೀಶ್ ಕೆ ಶರ್ಮಾ ಅವರು, ಪ್ರಧಾನ ಮಂತ್ರಿ ಕಚೇರಿಯಲ್ಲಿ ಸಂವೇದನಾಶೀಲತೆ ಕೊರತೆ ಎದ್ದು ಕಂಡಿದೆ ಎಂದು ಆರೋಪಿಸಿದ್ದರು.
ಕಳೆದ 14 ವರ್ಷಗಳಿಂದ 10 ಡೌನಿಂಗ್ ಸ್ಟ್ರೀಟ್ನಲ್ಲಿ ದೀಪಾವಳಿ ಆಚರಣೆಯು ಮಾಂಸ ಮತ್ತು ಮದ್ಯಪಾನವಿಲ್ಲದೇ ನಡೆಯುತ್ತಿದೆ. ಈ ವರ್ಷದ ಆಚರಣೆಯು ಮಾಂಸಾಹಾರ-ಪ್ರೇರಿತ ಮೂರ್ಖತನ ಕಂಡುಬಂದಿದ್ದರಿಂದ ನಾನು ನಿರಾಶೆಗೊಂಡಿದ್ದೇನೆ ಮತ್ತು ಆಘಾತಕ್ಕೊಳಗಾಗಿದ್ದೇನೆ. ಇದು ದುರಂತ. ಪ್ರಧಾನ ಮಂತ್ರಿಯ ಸಲಹೆಗಾರರು ತುಂಬಾ ಅಸಡ್ಡೆ ಮತ್ತು ನಿರ್ಲಕ್ಷ್ಯದಿಂದ ಇರುತ್ತಿದ್ದರು ಎಂದು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದರು.