– ಕಳಪೆ ಕಾಮಗಾರಿಯಾಗಿದ್ರೂ ರೋಡ್ ಲಕ ಲಕ
ಬೀದರ್: ಇಂದು ಜಿಲ್ಲೆಯ ಬಸವಕಲ್ಯಾಣದ ಉಜಳಂಬ ಗ್ರಾಮಕ್ಕೆ ಆಗಮಿಸಿ ಜನತಾ ದರ್ಶನ ನಡೆಸಲಿದ್ದಾರೆ. ಈ ಬಾರಿ ಮುಖ್ಯಮಂತ್ರಿಗಳು ವಾಸ್ತವ್ಯ ಮಾಡುತ್ತಿರುವ 3ನೇ ಗ್ರಾಮ ಇದಾಗಿದೆ. ಕರೇಗುಡ್ಡ ಗ್ರಾಮದಂತೆ ಇಲ್ಲಿಯೂ ತರಾತುರಿಯಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ರಸ್ತೆ, ಚರಂಡಿಗಳನ್ನು ಮಾಡಿ ಝಗಮಗಿಸುವಂತೆ ಮಾಡಲಾಗಿದೆ. ಆದರೆ ಇವುಗಳ ಗುಣಮಟ್ಟ ಮಾತ್ರ ಕಳಪೆಯಾಗಿದ್ದು, ಒಂದೇ ಒಂದು ಮಳೆ ಬಂದರೆ ಎಲ್ಲಾ ಕೊಚ್ಚಿಕೊಂಡು ಹೋಗುವಂತಿದೆ.
ಉಜಳಂಬ ಗ್ರಾಮದಲ್ಲಿ ವಿದ್ಯುತ್ ಕೈ ಕೊಡುತ್ತಿತ್ತು. ಸಿಎಂ ಆಗಮನ ಎಚ್ಚೆತ್ತ ಅಧಿಕಾರಿಗಳು ಕಂಬ, ವೈರ್ ಎಲ್ಲಾ ಚೇಂಜ್ ಮಾಡಿ ವಿದ್ಯುತ್ ಸಮಸ್ಯೆ ಆಗದಂತೆ ಮಾಡಿದ್ದಾರೆ. ಗ್ರಾಮದ ಶಾಲೆಗೆ ಅವಸರದಲ್ಲಿ ಸುಣ್ಣ ಬಣ್ಣ ಬಳಿದು ಕಂಗೊಳಿಸುವಂತೆ ಮಾಡಲಾಗಿದೆ. ಜೊತೆಗೆ ಸಿಎಂ ವಾಸ್ತವ್ಯಕ್ಕಾಗಿ ಸಕಲ ವ್ಯವಸ್ಥೆ ಕಲ್ಪಿಸಲಾಗಿದೆ. ಶಾಲೆ ಮುಂಭಾಗ ಜನತಾ ದರ್ಶನಕ್ಕೆ ವೇದಿಕೆ ಸಿದ್ಧಪಡಿಸಲಾಗಿದೆ. ಜೊತೆಗೆ ಅಹವಾಲು ಸ್ವೀಕರಿಸಲು ತಡವಾಗಬಾರದು ಅನ್ನೋ ಕಾರಣಕ್ಕೆ ವೇದಿಕೆ ಕಾರ್ಯಕ್ರಮಕ್ಕೆ ಕೊಕ್ ನೀಡಲಾಗಿದೆ.
ಒಟ್ಟಿನಲ್ಲಿ ಸಿಎಂ ಆಗಮನದ ಹಿನ್ನೆಲೆಯಲ್ಲಿ ಉಜಳಂಬ ಗ್ರಾಮ ಅಲಂಕಾರಗಳಿಂದ ಸಿದ್ಧಗೊಂಡಿದೆ. ಈಗಾಗಲೇ ಮುಖ್ಯಮಂತ್ರಿಗಳು ರಾಯಚೂರಿನ ಕರೇಗುಡ್ಡದ ಗ್ರಾಮದಿಂದ ಉಜಳಂಬದತ್ತ ಪ್ರಯಾಣ ಬೆಳೆಸಿದ್ದು, ಬೆಳಗ್ಗೆ 10.30ಕ್ಕೆ ತಲುಪಲಿದ್ದಾರೆ.