ಯುಗಾದಿಯು (Ugadi) ಹಿಂದೂ ಸಂಪ್ರದಾಯದ ನೂತನ ವರ್ಷದ ಆರಂಭವಾಗಿದ್ದು, ಚೈತ್ರ ಮಾಸದ ಶುದ್ಧ ಪಾಡ್ಯಮಿಯಂದು ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ, ಯುಗಾದಿ ದಿನದಂದೇ ಬ್ರಹ್ಮನು ವಿಶ್ವದ ಸೃಷ್ಟಿಯನ್ನು ಆರಂಭಿಸಿದ ಎಂಬ ಪುರಾಣದ ಕಥೆಯಿದೆ. ರಾಮನೂ (Lord Rama) ರಾವಣನನ್ನು ಸಂಹರಿಸಿ ವನವಾಸ ಮುಗಿಸಿ ಅಯೋಧ್ಯೆಗೆ ಮರಳಿದ ಬಳಿಕ ಇದೇ ದಿನ ಪಟ್ಟಾಭಿಷೇಕ ಮಾಡಿಕೊಂಡನೆಂಬ ಕಥೆಯಿದೆ.
ಸೀತೆಯನ್ನು ಅಪಹರಿಸಿ ತೊಂದರೆ ಕೊಟ್ಟಿದ್ದ ರಾವಣನನ್ನು ವಿಜಯದಶಮಿಯಂದು ರಾಮ ವಧೆ ಮಾಡುತ್ತಾನೆ. ರಾವಣನನ್ನು ವಧಿಸಿ ದೀಪಾವಳಿಯ ದಿನ ಅಯೋಧ್ಯೆಗೆ (Ayodhya) ಮರಳಿದ್ದ ರಾಮನಿಗೆ ದೀಪಗಳನ್ನು ಬೆಳಗಿಸಿ, ಸಾಲು ಸಾಲು ದೀಪ ಹಚ್ಚಿ ಸ್ವಾಗತ ಕೋರಲಾಗಿತ್ತು. ರಾವಣನ ವಧೆಯ ಬಳಿಕ ಅಯೋಧ್ಯೆಯಲ್ಲಿ ವಿಜಯೋತ್ಸವ ಆಚರಿಸಲಾಗಿತ್ತು. ದುಷ್ಟರ ಮೇಲೆ ಶಿಷ್ಟರ ವಿಜಯದ ಸಂಕೇತವಾಗಿ ಈ ದಿನವನ್ನು ಇಂದಿಗೂ ಆಚರಿಸಲಾಗುತ್ತದೆ. ನಂತರ ಯುಗಾದಿಯಂದು ರಾಮನ ಪಟ್ಟಾಭಿಷೇಕ ನೆರವೇರುತ್ತದೆ. ಈ ಮೂಲಕ ಕೆಡುಕಿಂದ ಒಳಿತಿನೆಡೆ ನಡೆವ ಸಂಕೇತವನ್ನು ಯುಗಾದಿ ಸೂಚಿಸುತ್ತದೆ.

ಈ ಪಟ್ಟಾಭಿಷೇಕವು ‘ರಾಮರಾಜ್ಯ’ದ (ಆದರ್ಶ ಆಡಳಿತ) ಆರಂಭವನ್ನು ಸೂಚಿಸುತ್ತದೆ. ಅಲ್ಲಿ ಪ್ರಜೆಗಳು ಧರ್ಮ, ಸುಖ ಮತ್ತು ಶಾಂತಿಯಿಂದ ಬದುಕುತ್ತಾರೆ ಎಂಬ ನಂಬಿಕೆ ಇದೆ. ಹೀಗೆ ಯುಗಾದಿ ಬದುಕಿಗೆ ಬರುವ ಒಳ್ಳೆಯ ವಿಚಾರ, ಒಳ್ಳೆಯ ದಿನಗಳನ್ನು ಸ್ವಾಗತಿಸುವ ಹಬ್ಬವಾಗಿದೆ.
ಯುಗಾದಿಯ ದಿನದಂದು ರಾಮ, ಸೀತೆ, ಲಕ್ಷ್ಮಣ ಸಮೇತ ಪಟ್ಟಾಭಿಷೇಕದ ಫೋಟೋವನ್ನು ಪೂಜಿಸಿ, ಬೇವು-ಬೆಲ್ಲವನ್ನು ಸೇವಿಸುವ ಪದ್ಧತಿ ಸಹ ಹಲವೆಡೆ ಆಚರಣೆಯಲ್ಲಿದೆ. ಈ ಮೂಲಕ ಯುಗಾದಿಯು ಕೇವಲ ಹೊಸ ವರ್ಷವಲ್ಲ, ರಾಮನ ವಿಜಯದ ನೆನಪಿನ ಹಬ್ಬವೂ ಆಗಿದೆ.
ಇದರೊಂದಿಗೆ ವಸಂತ ಋತುವಿನ ಆರಂಭದಲ್ಲಿ ಬರುವ ಯುಗಾದಿ ಹಬ್ಬವು ಪ್ರಕೃತಿಯಲ್ಲಿನ ನವಚೇತನವನ್ನು ಸೂಚಿಸುತ್ತದೆ. ಇದೇ ಹೊತ್ತಲ್ಲಿ ಜನ ಸವಿಯುವ ಬೇವು-ಬೆಲ್ಲ ಜೀವನದ ಕಹಿ-ಸಿಹಿ (ದುಃಖ-ಸುಖ) ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ.

