ಹಾಸನ: ಜಿಲ್ಲೆಯ ಚನ್ನರಾಯ ಪಟ್ಟಣ ಸೇರಿದಂತೆ ಜಿಲ್ಲೆಯ ಗಡಿಭಾಗದ ಹಲವಾರ ಜನರು ಮಹಾರಾಷ್ಟದಲ್ಲಿ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ಯುಗಾದಿ ಹಬ್ಬಕ್ಕೆ ಸ್ವಗ್ರಾಮಕ್ಕೆ ಆಗಮಿಸುತ್ತಿರುವುದು ಆರೋಗ್ಯಾಧಿಕಾರಿಗಳ ನಿದ್ದೆಗೆಡಿಸಿದೆ.
ಕೊರೊನಾ ಸೋಂಕು ತಡೆ ಬಗ್ಗೆ ಭವಾನಿ ರೇವಣ್ಣ ನೇತೃತ್ವದಲ್ಲಿ ಹಾಸನ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಭೆ ಕರೆಯಲಾಗಿತ್ತು. ಈ ಬಗ್ಗೆ ಆತಂಕ ಹೊರಹಾಕಿದ ಚನ್ನರಾಯಪಟ್ಟಣ ತಾಲ್ಲೂಕು ವೈದ್ಯಾಧಿಕಾರಿ ನಾಗೇಶ್ ಆರಾಧ್ಯ, ಮಹಾರಾಷ್ಟ್ರದಲ್ಲಿ ಹಲವು ಜನರಲ್ಲಿ ಕೊರೊನಾ ರೋಗ ಪತ್ತೆಯಾಗಿದೆ. ಹೀಗಾಗಿ ಮಹಾರಾಷ್ಟ್ರದಿಂದ ಬರುವವರನ್ನು ಕರ್ನಾಟಕ ಗಡಿ ಭಾಗದಲ್ಲೇ ಪರೀಕ್ಷೆ ಮಾಡಿ ಒಳಗೆ ಕರೆದುಕೊಂಡರೆ ಒಳಿತು. ಅಲ್ಲಿಂದ ಬರುವವರ ಮೇಲೆ ನಿಗಾ ಇಡಬೇಕು ಎಂದರು.
ಮಹಾರಾಷ್ಟ್ರದಿಂದ ಬಂದ ನಂತರ ಯಾವುದಾದರು ಪಾಸಿಟಿವ್ ಬಂದರೆ ತುಂಬಾ ಕಷ್ಟ ಆಗಲಿದೆ. ಅದಕ್ಕೆ ಏನು ಮಾಡಬೇಕು ಎಂದು ಆತಂಕ ಹೊರಹಾಕಿದರು. ಈ ವೇಳೆ ಮಾತನಾಡಿದ ಡಿಎಚ್ಒ, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗುವುದು. ಜಿಲ್ಲೆಯ ಗಡಿಭಾಗದಲ್ಲೂ ಅವರನ್ನು ಪರೀಕ್ಷೆ ಮಾಡಲು ವ್ಯವಸ್ಥೆ ಮಾಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.