ಉಡುಪಿ: ನಗರದ ಆದಿ ಉಡುಪಿ ತರಕಾರಿ ಮಾರುಕಟ್ಟೆಯಲ್ಲಿ ಸರ್ಕಾರದ ನಿಯಮವನ್ನು ಗಾಳಿಗೆ ತೂರಲಾಗಿದೆ. ಮೂರು ಗಂಟೆಗಳ ಕಾಲ ಜನ ಮುಗಿಬಿದ್ದು ತರಕಾರಿ ಖರೀದಿ ಮಾಡಿದ್ದಾರೆ.
ಕೊರೊನಾ ವೈರಸ್ ಹರಡುವ ಭೀತಿ ಇರುವುದರಿಂದ ಜನ ಒಂದೆಡೆ ಸೇರಬಾರದು ಎಂದು ಸರ್ಕಾರ ನಿಯಮಗಳನ್ನು ರೂಪಿಸಿದೆ. ಮಾರುಕಟ್ಟೆಯನ್ನು ತೆರೆಯಲೇ ಬಾರದು ಎಂದು ಉಡುಪಿ ಜಿಲ್ಲಾಡಳಿತ ಖಡಕ್ ಆದೇಶವನ್ನು ಕೊಟ್ಟಿತ್ತು. ಆದರೂ ಜಿಲ್ಲಾಡಳಿತ ಆದೇಶಕ್ಕೆ ಉಡುಪಿ ಜನ ಮತ್ತು ವ್ಯಾಪಾರಿಗಳು ಕ್ಯಾರೇ ಎನ್ನಲ್ಲಿಲ್ಲ. ಬೆಳಗ್ಗೆ ಸುಮಾರು 8 ರಿಂದ 11 ಗಂಟೆಯ ತನಕ ಜನ ಮುಗಿಬಿದ್ದು ತರಕಾರಿಗಳನ್ನು ಖರೀದಿ ಮಾಡಿದರು.
ಬುಧವಾರ ಸಂತೆಯಲ್ಲಿ ಚಿಕ್ಕಮಗಳೂರು, ಹಾಸನ, ಶಿವಮೊಗ್ಗದ ವ್ಯಾಪಾರಿಗಳು ಅಲ್ಲಿಂದ ತರಕಾರಿಗಳನ್ನು ತಂದು ಉಡುಪಿಯಲ್ಲಿ ಹೋಲ್ಸೇಲ್ ದರಕ್ಕೆ ಮಾರುತ್ತಾರೆ. ಹಾಗಾಗಿ ಕಡಿಮೆ ದರದ ತರಕಾರಿಯನ್ನು ಖರೀದಿಸಲು ಹೊರಟ ಜನ ಸಾಮಾಜಿಕ ಅಂತರವನ್ನು ಕಾಪಾಡಲಿಲ್ಲ. ಪೊಲೀಸರು ಆರಂಭದಲ್ಲಿ ವ್ಯಾಪಾರಕ್ಕೆ ಅವಕಾಶ ಕೊಟ್ಟರೂ ನಂತರ ಜನ ಇದನ್ನು ದುರುಪಯೋಗ ಪಡಿಸಲು ಮುಂದಾಗಿದ್ದರು. ಈ ಹಂತದಲ್ಲಿ ಪೊಲೀಸರು ಲಾಠಿ ಬೀಸಿ ವ್ಯಾಪಾರಿಗಳನ್ನು ಮತ್ತು ಗ್ರಾಹಕರನ್ನು ಚದುರಿಸಿದರು.