ಉಡುಪಿ: ಉಡುಪಿ ಶ್ರೀಕೃಷ್ಣ ಮಠದ ಸೊಬಗನ್ನ ನೋಡದವರುಂಟೆ. ಆದ್ರೆ ನೀವಂದುಕೊಂಡ ಹಾಗೆ ಹಳೆ ಕೃಷ್ಣಮಠ ಉಡುಪಿಯಲ್ಲಿ ಕಾಣಸಿಗೋದಿಲ್ಲ. ಯಾಕೆಂದರೆ ಕಡೆಗೋಲು ಕೃಷ್ಣನ ಸನ್ನಿಧಾನ ಸಂಪೂರ್ಣ ಬದಲಾಗಿದೆ.
ಕೃಷ್ಣಮಠಕ್ಕೆ ದಿನನಿತ್ಯ ಸಾವಿರಾರು ಮಂದಿ ಭಕ್ತರು ಬಂದು ಹೋಗುತ್ತಾರೆ. ಮಠದೊಳಗೆ ನೂರಿನ್ನೂರು ಜನ ಸೇರಿದ್ರೂ ಉಸಿರುಗಟ್ಟುವ ವಾತಾವರಣವಿರುತ್ತಿತ್ತು. ಮಹಾಪೂಜೆ ವೇಳೆ ಗಾಳಿಯ ಸಂಚಾರವೂ ಇರುತ್ತಿರಲಿಲ್ಲ. ಆದರೆ ಈಗ ಕೃಷ್ಣಮಠದ ಮೇಲೊಂದು ಪೌಳಿ ನಿರ್ಮಿಸಿ ಗಾಳಿ-ಬೆಳಕಿಗೆ ವ್ಯವಸ್ಥೆ ಮಾಡಲಾಗಿದೆ.
800 ವರ್ಷಗಳ ಇತಿಹಾಸವುಳ್ಳ ಕೃಷ್ಣ ಮಠ 16 ವರ್ಷದ ಹಿಂದೊಮ್ಮೆ ನವೀಕರಣಗೊಂಡಿತ್ತು. ಪೇಜಾವರ ಶ್ರೀಗಳ ಪರ್ಯಾಯ ಹಿನ್ನೆಲೆಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಪುನರ್ ನವೀಕರಣ ಮಾಡಲಾಗ್ತಿದೆ. ಮೇಲ್ಛಾವಣಿಗೆ ಹಿತ್ತಾಳೆಯ ತಟ್ಟೆಗಳನ್ನು ಅಳವಡಿಸಲಾಗಿದೆ. ಪೌಳಿಗೆ ಮರದ ಕೆತ್ತನೆಗಳು, ಬೃಹತ್ ಕಂಬಗಳನ್ನು ಅಳವಡಿಸಲಾಗಿದೆ.
ಇದೇ ತಿಂಗಳ 18ರಂದು ಅದ್ಧೂರಿ ಬ್ರಹ್ಮಕಲಶೋತ್ಸವ ನಡೆಯಲಿದ್ದು, ಪೊಡವಿಗೊಡೆಯನ ಮಠ ಹೊಸ ರೂಪಿನೊಂದಿಗೆ ಭಕ್ತಾದಿಗಳನ್ನು ಆಕರ್ಷಿಸ್ತಿದೆ.