– ಸಿಎಂ ಆಡಿಯೋ ಬಾಂಬ್ ಆಗೋದಕ್ಕೆ ಸಾಧ್ಯವಿಲ್ಲ
– ಎಚ್ಡಿಕೆ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ
ಉಡುಪಿ: ಮಾಜಿ ಸಿಎಂ ಸಿದ್ದರಾಮಯ್ಯ ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಅಗಿದ್ದವರು. ಸಿದ್ದರಾಮಯ್ಯ ಒಬ್ಬ ಡರ್ಟಿ ಪಾಲಿಟಿಷಿಯನ್ ಎಂದು ಸಂಸದೆ ಶೋಭಾ ಕರಂದ್ಲಾಜೆ ಮಾಜಿ ಸಿಎಂ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂದು ನಗರದಲ್ಲಿ ಸಿಎಂ ಆಡಿಯೋ ಲೀಕ್ ವಿಚಾರವಾಗಿ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಸಿಎಂ ಆಡಿಯೋ ಬಾಂಬ್ ಆಗೋದಕ್ಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ನವರು ಡರ್ಟಿ ಗೇಮ್ ಮಾಡುತ್ತಲೇ ಇದ್ದಾರೆ. ಅವರು ನಿರಂತರ ಬ್ಲ್ಯಾಕ್ ಮೇಲ್ ಮಾಡಿಕೊಂಡು ರಾಜಕಾರಣ ಮಾಡಿದವರು. ಜೆಡಿಎಸ್ ಬಿಟ್ಟ ನಂತರ ಕಾಂಗ್ರೆಸನ್ನು ಬ್ಲ್ಯಾಕ್ ಮೇಲ್ ಮಾಡುತ್ತಲೇ ಇದ್ದಾರೆ. ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಐದು ವರ್ಷ ಸಿಎಂ ಆಗಿದ್ದರು ಎಂದು ಗಂಭೀರ ಆರೋಪ ಮಾಡಿದ್ದಾರೆ.
ಬ್ಲ್ಯಾಕ್ ಮೇಲ್ ಮಾಡಿಕೊಂಡೇ ಸಿದ್ದರಾಮಯ್ಯ ವಿಪಕ್ಷ ನಾಯಕನಾಗಿದ್ದಾರೆ. ಸಿದ್ದರಾಮಯ್ಯನಿಂದ ಯಾರೂ ಕಲಿಯುವ ಅಗತ್ಯವಿಲ್ಲ. ಸಿದ್ದರಾಮಯ್ಯನವರ ಪಾಠ ಕೆಟ್ಟ ಪಾಠ, ಮುಂದಿನ ಪೀಳಿಗೆಗೆ ಕೆಟ್ಟ ಸಂದೇಶ ಆಗುತ್ತದೆ ಎಂದರು. ಇದೇ ವೇಳೆ ಕಾಂಗ್ರೆಸ್ ನಾಯಕ ವಿಜಯ ಶಂಕರ್ ಬಿಜೆಪಿಗೆ ಸೇರುವ ವಿಚಾರದ ಬಗ್ಗೆ ಮಾತನಾಡಿ, ವಿಜಯ ಶಂಕರ್ ಅವರು ಸಿದ್ದರಾಮಯ್ಯನವರ ಜನಾಂಗದಲ್ಲೇ ಸಜ್ಜನ ವ್ಯಕ್ತಿ. ಸಿದ್ದರಾಮಯ್ಯನವರ ಸ್ವಂತ ನೆಲದಲ್ಲಿ ಕಾಂಗ್ರೆಸ್ ಬಿಡುತ್ತಿದ್ದಾರೆ. ನಮಗೆ ಈ ವಿಚಾರ ಖುಷಿ ಮತ್ತು ಸಂತೋಷ ತಂದಿದೆ ಎಂದು ತಿಳಿಸಿದರು.
ಅನರ್ಹರು ಬಿಜೆಪಿಗೆ ಬರುವ ವಿಚಾರದ ಬಗ್ಗೆ ಮಾತನಾಡಿದ ಅವರು, ಅನರ್ಹ ಶಾಸಕರು ಅವರಿಗೆ ಬೇಕಾದ ಪಕ್ಷಕ್ಕೆ ಸೇರಬಹುದು. ಅನರ್ಹರು ಯಾವುದೇ ಬಂಧನದಲ್ಲಿ ಇಲ್ಲ. ಅವರು ಅವರ ಕ್ಷೇತ್ರದಲ್ಲಿ ಓಡಾಡುತ್ತಿದ್ದಾರೆ. ನಂಬರ್ ಗೇಮ್ ನಲ್ಲಿ ನಮ್ಮ ಸರ್ಕಾರ ರಚನೆಯಾಗಿದೆ. ಅನರ್ಹರ ಕಾರಣಕ್ಕಾಗಿ ಬಿಜೆಪಿ ಸರ್ಕಾರ ರಚನೆಯಾಗಿದೆ. ಈ ಅಂಶವನ್ನು ಯಡಿಯೂರಪ್ಪ ಮಾತನಾಡಿದ್ದಾರೆ. ಇದರಲ್ಲಿ ತಪ್ಪು, ಅನ್ಯಾಯದ ಪ್ರಶ್ನೆ ಬರಲ್ಲ ಎಂದು ಬಿಎಸ್ವೈ ಆಡಿಯೋ ವಿಚಾರವನ್ನು ಸಮರ್ಥಿಸಿಕೊಂಡರು.
17 ಜನ ಅನರ್ಹ ಶಾಸಕರು ಇಷ್ಟ ಪಡುವ ಪಕ್ಷದಿಂದ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಾರೆ. ಅನರ್ಹರನ್ನು ಬಿಜೆಪಿಗೆ ಸೇರಿಸಲು ಪ್ರಯತ್ನಪಡುತ್ತಿದ್ದೇವೆ. ಅವರು ಖಂಡಿತಾ ಬಿಜೆಪಿಗೆ ಬರಬಹುದು, ಸ್ಪರ್ಧಿಸಬಹುದು ಎಂದು ಹೇಳಿದರು. ಇದೇ ವೇಳೆ ಮಾಜಿ ಸಿಎಂ ಹೆಚ್ಡಿಕೆ ಮತ್ತು ಮಾಜಿ ಪಿಎಂ ಹೆಚ್ಡಿಡಿ ವಿಚಾರದಲ್ಲಿ ಸಾಫ್ಟ್ ಆಗಿ ಮಾತನಾಡಿದ ಅವರು, ದೇವೇಗೌಡ ಮತ್ತು ಕುಮಾರಸ್ವಾಮಿ ಬಗ್ಗೆ ಏನೂ ಹೇಳಲ್ಲ. ಕಳೆದ ಒಂದು ವರ್ಷದ ಕಾಂಗ್ರೆಸ್ ಜೆಡಿಎಸ್ನ್ನು ಹೇಗೆ ನಡೆಸಿಕೊಂಡಿದ್ದಾರೆ ಗೊತ್ತಿದೆ. ಕುಮಾರಸ್ವಾಮಿ ಅಧಿಕಾರ ಕಳೆದುಕೊಳ್ಳಲು ಸಿದ್ದರಾಮಯ್ಯ ಕಾರಣ. ಜೆಡಿಎಸ್ ಹಲವು ನಾಯಕರೇ ಇದನ್ನು ಹೇಳಿದ್ದಾರೆ. ಅವರಿಬ್ಬರ ಬಗ್ಗೆ ನಾನು ಮಾತನಾಡಲ್ಲ. ಚುನಾವಣೆ ಆದ ಮೇಲೆ ಕಮೆಂಟ್ ಮಾಡುತ್ತೇನೆ ಎಂದರು.
ಇಡಿಯಿಂದ ಡಿಕೆಶಿ ಬಂಧನ ವಿಚಾರ, ಇಡಿ ಅಧಿಕಾರಿಗಳು ಸಾರ್ವಜನಿಕವಾಗಿ ಹೇಳಿಕೆ ಕೊಡಲ್ಲ. ಸ್ವಂತ ಲಾಭಕ್ಕಾಗಿ ಇಡಿಯನ್ನು ಬಳಸಬೇಡಿ. ಇಡಿಗೆ ಯಾವುದೇ ಬಾಸ್ ಇಲ್ಲ. ಇಡಿ ಸ್ವಯಂಸೇವಾ ಸಂಸ್ಥೆ ಮತ್ತು ಸಂವಿಧಾನ ಪ್ರಕಾರ ರಚಿತವಾದ ಸಂಸ್ಥೆ. ಆರು ತಿಂಗಳು, ಒಂದು ವರ್ಷ ಫಾಲೋ ಮಾಡಿ ಬಂಧಿಸಿರುತ್ತಾರೆ. ಇಡಿಗೆ ಯಾವ ಬಾಸಿನ ಅಗತ್ಯ ಇರೋದಿಲ್ಲ ಎಂದು ಡಿಕೆಶಿಗೆ ಟಾಂಗ್ ನೀಡಿದರು.