ಉಡುಪಿ: ಜಿಲ್ಲೆಯ ಹಿರಿಯ ಕಾಂಗ್ರೆಸ್ ಮುಖಂಡ, ಸಹಕಾರಿ ಕ್ಷೇತ್ರದ ಧುರೀಣ ಕೆ.ಕೆ.ಸರಳಾಯ ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಶರಣಾಗಿದ್ದಾರೆ.
ಪಟಾಕಿ ಸರಳಾಯ ಎಂದೇ ಪ್ರಸಿದ್ಧರಾಗಿದ್ದ ಕೆ.ಕೆ.ಸರಳಾಯ ಅವರಿಗೆ 88 ವರ್ಷ ವಯಸ್ಸಾಗಿತ್ತು. ಮಾನಸಿಕ ಖಿನ್ನತೆಯಿಂದ ಅವರು ಕೆಲಕಾಲ ಬಳಲಿದ್ದಾರೆ ಎಂದು ಆಪ್ತರು ಮಾಹಿತಿ ನೀಡಿದ್ದಾರೆ. ತನ್ನ ಪಣಿಯಾಡಿಯ ನಿವಾಸದಲ್ಲಿ ಮಧ್ಯಾಹ್ನ ಊಟ ಮುಗಿಸಿದ್ದ ಸರಳಾಯ ಅವರು ಬಳಿಕ ಮನೆ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶಬ್ಧ ಕೇಳಿದ ನೆರೆ ಮನೆಯವರು ಬಾವಿ ಬಳಿ ಬಂದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಗಮನಕ್ಕೆ ಬಂದಿದೆ.
- Advertisement 2
- Advertisement 3
ಸರಳಾಯ ಅವರ ಇಬ್ಬರು ಹೆಣ್ಣುಮಕ್ಕಳು ಮದುವೆಯಾಗಿ ಬೆಂಗಳೂರು ಮತ್ತು ವಿದೇಶದಲ್ಲಿ ನೆಲೆಸಿದ್ದಾರೆ. ಅವರ ಪತ್ನಿ ಆಸ್ಪತ್ರೆ ಸೇರಿದ ನಂತರ ಮನೆಯಲ್ಲಿ ಏಕಾಂಗಿಯಾಗಿ ಜೀವನ ನಡೆಸುತ್ತಿದ್ದರು. ಇದೇ ಕೊರಗಿನಲ್ಲಿ ಅವರು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
- Advertisement 4
ಹಿರಿಯ ಕಾಂಗ್ರೆಸ್ ಮುಖಂಡರಾಗಿದ್ದ ಸರಳಾಯ ಅವರು 86 ಬಡಗಬೆಟ್ಟು ಬೈಲೂರು ಇದರ ಮಂಡಲ ಪ್ರಧಾನರಾಗಿದ್ದರು. ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಪಕ್ಷದಲ್ಲಿ ಸಕ್ರೀಯರಾಗಿದ್ದರು. ಸಹಕಾರಿ ಕ್ಷೇತ್ರದಲ್ಲಿ ಹಲವಾರು ವರ್ಷಗಳ ಕಾಲ ಸೇವೆ ಸಲ್ಲಿಸಿದ ಸರಳಾಯರು ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರ ಅತ್ಯಾಪ್ತರಾಗಿದ್ದರು. ಕೊರಂಗ್ರಪಾಡಿ ವ್ಯವಸಾಯಿಕ ಸಹಕಾರಿ ಸಂಘ, ಉಡುಪಿ ಟೌನ್ ಕೋ ಅಪರೇಟಿವ್ ಸೊಸೈಟಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ರಥಬೀದಿಯಲ್ಲಿ ಪಟಾಕಿ ವ್ಯಾಪಾರ ಅರಂಭಿಸಿ ಯಶಸ್ವಿಯಾಗಿದ್ದರು. ಅವರು ಪಟಾಕಿ ಸರಳಾಯರೆಂದೇ ಖ್ಯಾತರಾಗಿದ್ದರು. ಅಗ್ನಿಶಾಮಕ ದಳ ಕಾರ್ಯಚರಣೆಯ ಮೂಲಕ ಶವವನ್ನು ಬಾವಿಯಿಂದ ಮೇಲಕ್ಕೆ ಎತ್ತಿದ್ದು. ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಕಾರ್ಯಚರಣೆಗೆ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಇಲಾಖೆಗೆ ಸಹಕರಿಸಿದ್ದಾರೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.