ಉಡುಪಿ: ಬ್ಯುಸಿ ಶೂಟಿಂಗ್ ನಡುವೆಯೇ ಸ್ಯಾಂಡಲ್ವುಡ್ ನಟ ರಕ್ಷಿತ್ ಶೆಟ್ಟಿ ತಮ್ಮ ಅಜ್ಜಿಯ ಉತ್ತರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ. ಬಾಲ್ಯದಲ್ಲಿ ಅಕ್ಕರೆ ತೋರಿದ್ದ ಅಜ್ಜಿಯನ್ನು ನೆನೆದು ರಕ್ಷಿತ್ ಕಣ್ಣುಗಳು ತೇವಗೊಂಡವು.
ಸ್ವಾತಂತ್ರ್ಯ ಹೋರಾಟಗಾರ ಬೈಕಾಡಿ ವಿಠಲ ಶೆಟ್ಟಿ ಅವರ ಧರ್ಮಪತ್ನಿ, ನಟ ರಕ್ಷಿತ್ ಶೆಟ್ಟಿ ಅಜ್ಜಿ ವನಜಾ ಶೆಟ್ಟಿ ವಾರದ ಹಿಂದೆ ವಯೋಸಹಜ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ್ದರು. ಮೃತರ ಉತ್ತರಕ್ರಿಯೆ ಅಲೆವೂರು ದೊಡ್ಡ ಮನೆ ಪ್ರಿಯಾ ನಿವಾಸದಲ್ಲಿ ಇಂದು ನಡೆಯಿತು.
ಅವನೇ ಶ್ರೀಮನ್ನಾರಾಯಣ ಚಿತ್ರದ ಒಡಾಟದಲ್ಲಿರುವ ರಕ್ಷಿತ್ಗೆ ಅಜ್ಜಿಯಂದರೆ ಬಹಳ ಪ್ರೀತಿಯಂತೆ. ಬಾಲ್ಯದಿಂದ ಅಜ್ಜಿಯ ಜೊತೆ ಬಹಳ ಒಡನಾಟ ಇತ್ತು ಅಂತ ವನಜಾ ಶೆಟ್ಟಿ ಸಂಬಂಧಿ ರಾಜೇಶ್ ಹೇಳಿದ್ದಾರೆ. ಮೃತ ಅಜ್ಜಿಯ ಅಕ್ಕರೆ ನೆನೆದು ರಕ್ಷಿತ್ ಕಣ್ಣೀರಿಟ್ಟರು ಅಂತ ಅವರು ಮಾಹಿತಿ ನೀಡಿದರು.
ಶೂಟಿಂಗ್ ಬ್ಯುಸಿ ಇದ್ದದ್ದರಿಂದ ಅಂತ್ಯ ಸಂಸ್ಕಾರದಲ್ಲಿ ರಕ್ಷಿತ್ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಬೆಂಗಳೂರಿನಿಂದ ಆಗಮಿಸಿದ ಅವರು ಕುಟುಂಬದ ಸದಸ್ಯರ ಜೊತೆ ಉತ್ತರ ಕ್ರಿಯೆಯಲ್ಲಿ ಪಾಲ್ಗೊಂಡರು.