ಉಡುಪಿ: ಕರಾವಳಿ ಜಿಲ್ಲೆ ಉಡುಪಿಯಲ್ಲಿ ಹಿಂದೆಂದೂ ಕಂಡರಿಯದ ಕುಡಿಯುವ ನೀರಿನ ಬರ ಬಂದಿದೆ. ಮಳೆರಾಯನಿಗೆ ಕಾದ ಜನ ಸುಸ್ತಾಗಿದ್ದಾರೆ. ಈ ಕಾರಣದಿಂದ ಮಳೆಗಾಗಿ ಉಡುಪಿಯಲ್ಲಿ ಕಪ್ಪೆ ಮದುವೆ ಮಾಡಿಸಿದ್ದಾರೆ.
ಜಿಲ್ಲೆಯಲ್ಲಿ ಮಳೆಬಾರದ ಹಿನ್ನಲೆಯಲ್ಲಿ ಕುಡಿಯುವ ನೀರಿಗೂ ಅಭಾವ ಹೆಚ್ಚಾಗಿದೆ. ಮಳೆ ಬರಲಿ ಎಂದು ಪೂಜೆ-ಪುನಸ್ಕಾರ ಮಾಡಿದ್ದಾರೆ. ಯಾವುದಕ್ಕೂ ವರುಣದೇವ ಜಗ್ಗದ ಕಾರಣ ಇವತ್ತು ಕಪ್ಪೆ ಮದುವೆ ಮಾಡಿಸಿ ಮಳೆಗಾಗಿ ಪ್ರಾರ್ಥನೆ ಮಾಡಿದ್ದಾರೆ.
ಇಂದು ಉಡುಪಿ ಜಿಲ್ಲಾ ನಾಗರಿಕ ಸಮಿತಿ ಮತ್ತು ಪಂಚರತ್ನ ಟ್ರಸ್ಟ್ ಆಯೋಜಿಸಿದ್ದ ಮಂಡೂಕ ಕಲ್ಯಾಣೋತ್ಸವದಲ್ಲಿ ವರ್ಷಾ ಹೆಸರಿನ ವಧು ಕಪ್ಪೆ, ಹಾಗೂ ವರುಣ ಹೆಸರಿನ ವರ ಕಪ್ಪೆಯ ವಿವಾಹ ನಡೆಯಿತು. ಇದಕ್ಕೂ ಮೊದಲು ಕಪ್ಪೆಗಳ ದಿಬ್ಬಣವನ್ನು ಬ್ಯಾಂಡ್, ವಾದ್ಯ, ತಾಳ ಮೇಳದ ನಡುವೆ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚಾರ ಮಾಡಿಸಲಾಯಿತು.
ನಂತರ ಪ್ರತಿಷ್ಠಿತ ಕಿದಿಯೂರ್ ಹೊಟೇಲ್ ಆವರಣದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆ ಶಾಸ್ತ್ರ ನೆರವೇರಿತು. ಗಂಡು ಹೆಣ್ಣಿನ ಕಡೆಯವರು ಸೇರಿ ಅರಸಿನದ ಕೊಂಬು ಮಾಂಗಲ್ಯ ಕಟ್ಟಿ, ಹಾರ ಬದಲಾಯಿಸಿ ಮಂಡೂಕಗಳಿಗೆ ಕಲ್ಯಾಣ ಭಾಗ್ಯ ಕರುಣಿಸಿದರು. ಮದುವೆಯ ನಂತರ ಮಣಿಪಾಲದ ಮಣ್ಣಪಳ್ಳ ಹಳ್ಳಕ್ಕೆ ಎರಡೂ ಕಪ್ಪೆಗಳನ್ನು ಮಧುಚಂದ್ರಕ್ಕೆ ಬಿಡಲಾಗಿದೆ.
2018ರಲ್ಲೂ ಬರದ ಸ್ಥಿತಿ ಉಂಟಾದಾಗ ಕಪ್ಪೆ ಮದುವೆ ಮಾಡಲಾಗಿತ್ತು. ಕಾಕತಾಳಿಯವೋ ಎಂಬಂತೆ ಅಂದು ಧಾರಾಕಾರ ಮಳೆ ಸುರಿದಿತ್ತು.