ಉಡುಪಿ: ವೃಂದಾವನಸ್ಥರಾದ ಪೇಜಾವರ ಮಠಾಧೀಶ ವಿಶ್ವೇಶತೀರ್ಥ ಸ್ವಾಮೀಜಿಗಳಿಗೆ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಸೋಮವಾರ ಉಡುಪಿಯಲ್ಲಿ ವಿಭಿನ್ನವಾಗಿ ಯೋಗ ನಮನ ಅರ್ಪಣೆ ಮಾಡಲಿದೆ.
ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ಕೃಷ್ಣಮಠದ ರಾಜಾಂಗಣದಲ್ಲಿ ವಿಷ್ಣು ದಶಾವತಾರ ನಮಸ್ಕಾರ ಯೋಗ ಮತ್ತು ಹನುಮಾನ ನಮಸ್ಕಾರ ನಡೆಯಲಿದೆ. ಈ ಮೂಲಕ ಶ್ರೀಗಳಿಗೆ ನುಡಿನಮನ ಸಲ್ಲಿಸಲಾಗುವುದು ಎಂದು ಸಂಸ್ಥೆಯ ಉಡುಪಿ ಸಂಚಾಲಕಿ ಭವಾನಿ ಭಟ್ ಹೇಳಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಸಪ್ತ ನಮಸ್ಕಾರದಲ್ಲಿ ಸೂರ್ಯ ನಮಸ್ಕಾರ, ಶಿವ ಗಣಪತಿ ನಮಸ್ಕಾರ, ಹಿಮಾಲಯ ಗಣಪತಿ ನಮಸ್ಕಾರ, ದುರ್ಗಾ ನಮಸ್ಕಾರಗಳಿವೆ. ಈ ಪೈಕಿ ಎರಡು ನಮಸ್ಕಾರವನ್ನು ಪೇಜಾವರ ಶ್ರೀಗಳಿಗೆ ಅರ್ಪಣೆ ಮಾಡಲಿದ್ದೆವೆ. ಜೊತೆಗೆ ವೈದ್ಯರ ಜೊತೆ ಸಮಾಲೋಚನೆ ಮಾಡಿ ಅಭಿಪ್ರಾಯ ಪಡೆದು ಹನುಮಾನ್ ನಮಸ್ಕಾರ ಪ್ರದರ್ಶನ ಮಾಡಲಿದ್ದು, ಇದು ಬಹಳ ಅಪರೂಪದ ಯೋಗವಾಗಿದೆ ಎಂದರು.
ಮೊತ್ತ ಮೊದಲ ಬಾರಿಗೆ ಪ್ರದರ್ಶನ ನಡೆಯಲಿದೆ. ಸೋಮವಾರ ವೈಕುಂಠ ಏಕಾದಶಿ ದಿನ. ದಕ್ಷಿಣ ಕನ್ನಡ, ಉಡುಪಿಯ 500 ಯೋಗ ಬಂಧುಗಳು ಪಾಲೊಳ್ಳುತ್ತಾರೆ. ಶ್ರೀಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಇದನ್ನು ಹಮ್ಮಿಕೊಳ್ಳಲಾಗಿದೆ. ನಮ್ಮ ಸಂಸ್ಥೆ ಕೇವಲ ಯೋಗ ಪ್ರದರ್ಶನ, ತರಗತಿ ಮಾಡುವುದಿಲ್ಲ. ಯೋಗ ಶಿಕ್ಷಣ ತರಬೇತಿ ಮಾಡುತ್ತೇವೆ. ಮುಂದೆ ಯೋಗ ಶಿಕ್ಷಕನನ್ನಾಗಿ ಮಾಡುತ್ತೇವೆ ಎಂದು ಮಂಗಳೂರಿನ ಅಣ್ಣಾ ಲಕ್ಷ್ಮೀನಾರಾಯಣ ಮಾಹಿತಿ ನೀಡಿದರು. ಜಗನ್ನಾಥ ಲಲಿತಾ ಕೆದ್ಲಾಯ, ಶ್ಯಾಮಲಾ ಯೋಗ ನಮನದ ಮಾಹಿತಿ ನೀಡಿದರು.