ಉಡುಪಿ: ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಗಳ ಬಗ್ಗೆ ಅಪಾರ ಅಭಿಮಾನ ಹೊಂದಿದ್ದ ಭಟ್ಕಳದ ಮುಸಲ್ಮಾನರು ಉಡುಪಿ ಪೇಜಾವರ ಮಠಕ್ಕೆ ಆಗಮಿಸಿ ಸ್ವಾಮೀಜಿಗಳಿಗೆ ನುಡಿನಮನ ಸಲ್ಲಿಸಿದರು.
ಸ್ವಾಮಿಗಳ ಅಗಲಿಕೆಯಿಂದ ಬಹಳಷ್ಟು ನೊಂದಿದ್ದ ಮುಸ್ಲಿಮರು ಭಟ್ಕಳದಿಂದ ಪೇಜಾವರ ಮಠದಲ್ಲಿ ಶೃದ್ಧಾಂಜಲಿ ಸಲ್ಲಿಸಲೆಂದೇ ಬಂದಿದ್ದರು. ರಥಬೀದಿಯಲ್ಲಿ ಮಠದೊಳಗೆ ಪ್ರವೇಶಕ್ಕೆ ಕಾಯುತ್ತಿದ್ದರು. ವಿಷಯ ತಿಳಿದ ಮಠದ ಅಧಿಕಾರಿಗಳು ಮಠದೊಳಗೆ ಆಹ್ವಾನಿಸಿ, ಪರಿಚಯ ಪಡೆದುಕೊಂಡರು.
ಪೇಜಾವರ ಸ್ವಾಮಿಗಳ ಸ್ಮರಣೆ ಮಾಡುತ್ತ ಬಂದವರು, ಭಟ್ಕಳಕ್ಕೆ ವಿಶ್ವೇಶತೀರ್ಥರು ಭೇಟಿ ನೀಡಿದ್ದ ನೆನಪುಗಳನ್ನು ಮೆಲುಕು ಹಾಕಿದರು. ಎರಡು ಧರ್ಮದ ನಡುವೆ ಪೇಜಾವರ ಶ್ರೀಗಳು ಸೇತುವೆಯಾಗಿದ್ದರು ಎಂದು ಮುಸಲ್ಮಾನ ಮುಖಂಡರು ಹೇಳಿದರು. ಸ್ವಾಮೀಜಿಗಳ ಭಾವಚಿತ್ರಕ್ಕೆ ಭಕ್ತಿಯಿಂದ ಕೈ ಮುಗಿದು ಶ್ರದ್ಧಾಂಜಲಿ ಅರ್ಪಿಸಿದರು.