ಉಡುಪಿ: ನಗರದಲ್ಲಿ ಗುರುವಾರ ಅದ್ದೂರಿ ರಾಮ ನವಮಿ ಉತ್ಸವ ನಡೆದಿಲ್ಲ. ಕೆಲ ಕಿಡಿಗೇಡಿಗಳು ಮಠದ ಹಳೆಯ ಫೋಟೋಗಳನ್ನು ಬಳಸಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಪಲಿಮಾರು ವಿದ್ಯಾಧೀಶ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳೆದ 10 ದಿನಗಳಿಂದ ಉಡುಪಿ ಜಿಲ್ಲೆ ಕಾಪುವಿನ ಕುತ್ಯಾರು ಗ್ರಾಮದಲ್ಲಿ ಸರಳವಾದ ರಾಮೋತ್ಸವ ನಡೆಯುತ್ತಿದೆ. ಪಲಿಮಾರು ಶ್ರೀಗಳ ಶಿಷ್ಯರಾದ ರಾಜಗೋಪಾಲ ಆಚಾರ್ಯ ಎಂಬವರ ಮನೆಯಲ್ಲಿ ಕಾರ್ಯಕ್ರಮ ಆಯೋಜಿಸಿದ್ದಾರೆ. ಭಾರತ ಲಾಕ್ಡೌನ್ ಆಗಿರುವುದರಿಂದ ಎಲ್ಲಾ ಧಾರ್ಮಿಕ ಸಭೆ, ಪ್ರವಚನ, ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಕೇವಲ ಐದಾರು ಜನ ಅರ್ಚಕರು ಇಬ್ಬರು ಸ್ವಾಮೀಜಿ ಧಾರ್ಮಿಕ ವಿಧಿವಿಧಾನ ನಡೆಸುತ್ತಿದ್ದರು.
ರಾಮನವಮಿಯ ದಿನವಾದ ಗುರುವಾರ ಪಲಿಮಾರು ಹಿರಿಯ ಕಿರಿಯ ಶ್ರೀಗಳು ಅಭಿಷೇಕ, ಪೂಜೆ ಮಾಡಿದ್ದರು. ಧಾರ್ಮಿಕವಾಗಿ ಅವಶ್ಯವಿದ್ದ ಅರ್ಚಕರು ಈ ಸಂದರ್ಭ ಜೊತೆಗಿದ್ದರು. ಆದರೆ ಕೆಲ ಕಿಡಿಗೇಡಿಗಳು ತಿಂಗಳ ಹಿಂದಿನ ಪೂರ್ವಭಾವಿ ಸಭೆಯ ಫೋಟೋವನ್ನು ಬಳಸಿ ಇದೆಂಥಾ ನ್ಯಾಯ ಎಂದು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನಿಸುತ್ತಿದ್ದಾರೆ. ಹಳೆಯ ಫೋಟೋ ಇಟ್ಟು ಫಾರ್ವರ್ಡ್ ಮಾಡುತ್ತಿದ್ದಾರೆ. ಪೊಲೀಸರು ಮತ್ತು ಮಾಧ್ಯಮದ ಮೇಲೆ ಕಿಡಿ ಕಾರುತ್ತಿದ್ದಾರೆ. ಹಿಂದೂಗಳಿಗೆ ಒಂದು ನ್ಯಾಯ, ಮುಸಲ್ಮಾನರಿಗೆ ಇನ್ನೊಂದು ನ್ಯಾಯನಾ ಅಂತ ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಿದ್ದಾರೆ.
ಈ ನಡುವೆ ಪಲಿಮಾರು ಮಠದ ಪರವಾಗಿ ರಾಮೋತ್ಸವ ಸಮಿತಿಯ ಕಾರ್ಯದರ್ಶಿ ಪ್ರಸಾದ್ ಕುತ್ಯಾರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಇದು ಸುಳ್ಳು ಅಪಪ್ರಚಾರ. ರಾಮನ ವಿಚಾರದಲ್ಲಿ ಈ ರೀತಿ ಅಪಪ್ರಚಾರ ಮಾಡುವುದು ಸರಿಯಲ್ಲ. ರಾಮೋತ್ಸವದಲ್ಲಿ ಐದಾರು ಜನ ಬಿಟ್ಟರೆ ಸಮಿತಿಯ ಸದಸ್ಯರು ಕೂಡ ಪಾಲ್ಗೊಂಡಿಲ್ಲ. 10 ದಿನದ ಕಾರ್ಯಕ್ರಮಕ್ಕೆ ಮೂರ್ನಾಲ್ಕು ತಿಂಗಳಿಂದ ತಯಾರಿ ಮಾಡಿದ್ದೆವು. ಆದರೆ ಕಾನೂನು ಮೀರಬಾರದೆಂದು ದೇವರ ಕಾರ್ಯಕ್ರಮ ಸರಳವಾಗಿ ನಡೆಸಿದ್ದೇವೆ. ಪೂರ್ವಭಾವಿ ಸಭೆಯ ಸಂದರ್ಭದ ಹಳೆಯ ಫೋಟೋಗಳನ್ನು ಬಳಸಿ ವೈರಲ್ ಮಾಡಿರುವುದು ಖಂಡನೀಯ ಎಂದಿದ್ದಾರೆ. ಪಲಿಮಾರು ಶ್ರೀಗಳಿಗೆ ಇದರಿಂದ ಬೇಸರವಾಗಿದೆ ಎಂದು ಹೇಳಿದರು.