ಉಡುಪಿ: ಅಡುಗೆ ಎಣ್ಣೆ ಸಾಗಿಸುವ ಕಾರ್ಗೋ ವಾಹನದ ಚಾಲಕ ನಾಪತ್ತೆಯಾಗಿದ್ದು, 20 ದಿನಗಳ ನಂತರ ಆತನ ಶವ ಕೊಲೆಗೈದ ಸ್ಥಿತಿಯಲ್ಲಿ ಬೆಂಗಳೂರು ಹೊರವಲಯದ ರಾಮನಗರದ ಕುಂಬಳಗೋಡು ಎಂಬಲ್ಲಿ ಪತ್ತೆಯಾಗಿದೆ. ಈಗ ಮೃತ ಚಾಲಕನ ಸಾವಿನ ಸುತ್ತಾ ಹಲವಾರು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ.
ಅನಿಲ್ ಮೃತ ದುರ್ದೈವಿ. ಈತ ಮೂಲತಃ ಉಡುಪಿಯ ಪೆರ್ಡೂರಿನವನಾಗಿದ್ದು, ವೃತ್ತಿಯಲ್ಲಿ ಕಾರ್ಗೋ ಲಾರಿ ಚಾಲಕನಾಗಿದ್ದನು. ಆಗಸ್ಟ್ 28 ರಂದು ಮಂಗಳೂರಿನಿಂದ ಬೆಂಗಳೂರಿಗೆ ರುಚಿಗೋಲ್ಡ್ ಆಯಿಲ್ ಹೊತ್ತು ಮಾಹಾವೀರ ಕಾರ್ಗೋ ಹೊರಟಿದ್ದ. ಆದರೆ ಕಾರ್ಗೋ ಬೆಂಗಳೂರು ತಲುಪಲಿಲ್ಲ. ಅನಿಲ್, ಲಾರಿ ಮತ್ತು ಲಕ್ಷಾಂತರ ರೂಪಾಯಿ ಎಣ್ಣೆ ನಾಪತ್ತೆಯಾಗಿತ್ತು. 20 ದಿನದ ಬಳಿಕ ಅನಿಲ್ ಮೃತದೇಹ ವಾಪಸ್ಸಾಗಿದೆ. ಈಗ ಕೊಲೆಯ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಮೂವರನ್ನು ಬಂಧಿಸಿದ್ದಾರೆ. ಆದರೆ ಅನಿಲ್ ಕುಟುಂಬಸ್ಥರು ಕೊಲೆಯ ಹಿಂದೆ ಮಾಜಿ ಸಚಿವ ಅಭಯಚಂದ್ರ ಜೈನ್ ಕೈವಾಡವಿದೆ ಎಂದು ಆರೋಪಿದ್ದಾರೆ.
ಏನಿದು ಪ್ರಕರಣ?
ಅನಿಲ್ ಜಿಲ್ಲೆಯ ಕಾರ್ಕಳ ತಾಲೂಕಿನ ಪಾಡಿಗಾರ್ ನಿವಾಸಿ. ಪ್ರೀತಿಸಿ ಮದುವೆಯಾಗಿದ್ದ ಅನಿಲ್ ಪತ್ನಿ ಸಂಧ್ಯಾ ಹಾಗೂ ಪುಟ್ಟ ಮಗನ ಜೊತೆ ಚೊಕ್ಕ ಸಂಸಾರ ಕಟ್ಟಿಕೊಂಡಿದ್ದನು. ಚಾಲಕನಾಗಿದ್ದ ಅನಿಲ್ ಮಂಗಳೂರು ಜಿಲ್ಲೆಯ ಪಣಂಬೂರಿನಲ್ಲಿ ಇರುವ ಹೆಸರಾಂತ ಕಾರ್ಗೊ ಕಂಪೆನಿ ಸುಗಮದ ಮಹಾವೀರ ಕಾರ್ಗೋ ಸ್ ನಲ್ಲಿ ಎರಡು ವರ್ಷದಿಂದ ದುಡಿಯುತ್ತಿದ್ದನು. ಆಗಸ್ಟ್ 28 ರಂದು 7 ಲಕ್ಷ ಮೌಲ್ಯದ ಅಡುಗೆ ಎಣ್ಣೆ ತುಂಬಿದ ಲಾರಿ ಹತ್ತಿ ಬೆಂಗಳೂರು ಹೊರಟಿದ್ದನು.
ಆದರೆ ಆತ ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆ ಹಾರ ದಾಟಿ ಮೇಲೆ ನೆಟ್ ವರ್ಕ್ ಜೊತೆ ಅನಿಲ್ ಕೂಡ ನಾಪತ್ತೆಯಾಗಿದ್ದಾನೆ. ಹುಡುಕಾಟ ನಡೆಸಿದ ನಂತರ ಪತ್ನಿ ಹೆಬ್ರಿ ಠಾಣೆಯಲ್ಲಿ ದೂರು ನೀಡಿದ್ದರು. ರುಚಿ ಗೋಲ್ಡ್ ಅಡುಗೆ ಎಣ್ಣೆ ಕಂಪೆನಿಯ ಮಾಲೀಕರು ಪಣಂಬೂರು ಠಾಣೆಯಲ್ಲಿ ದೂರು ನೀಡಿದ್ದರು. ಇದೇ ದೂರಿನ ಆಧರಿಸಿ ಪಣಂಬೂರು ಪೊಲೀಸರು ತನಿಖೆ ನಡೆಸಿದ್ದರು. ಇದಾಗಿ 20 ದಿನಗಳ ಬಳಿಕ ಅನಿಲ್ ಮೃತ ದೇಹ ರಾಮನಗರದ ಕುಂಬಳಗೋಡಿನಲ್ಲಿ ಪತ್ತೆಯಾಗಿದೆ. ಜೊತೆಗೆ ಕೆಲಸ ಮಾಡುತ್ತಿದ್ದ ಡ್ರೈವರ್ ಹಾಗೂ ಆತನ ಸಂಬಂಧಿಗಳು ಸೇರಿ ಕೊಲೆ ನಡೆಸಿ ಪ್ಲಾಸ್ಟಿಕ್ ಸುತ್ತಿ ಹೂತು ಹಾಕಿದ್ದಾರೆ ಎನ್ನುವುದು ಪೊಲೀಸ್ ಮೂಲದ ಮಾಹಿತಿಯಿಂದ ತಿಳಿದು ಬಂದಿದೆ
ರಾಮನಗರದಲ್ಲಿ ಪತ್ತೆಯಾದ ಅನಿಲ್ ಮೃತ ದೇಹ ಮರಣೋತ್ತರ ಪರೀಕ್ಷೆ ಒಳಪಡಿಸಿದ ನಂತರ ಪಾರ್ಥಿವ ಶರೀರವನ್ನು ಮನೆಯವರಿಗೆ ಹಸ್ತಾಂತರ ಮಾಡಿದ್ದಾರೆ. ಮಗನ ಮೃತ ದೇಹಕ್ಕೆ ಅಂತಿಮ ವಿಧಿವಿಧಾನ ಜೊತೆ ಅಂತ್ಯ ಸಂಸ್ಕಾರ ನಡೆಸಿದ್ದಾರೆ. ಆದರೆ ಸಾವಿನ ಹಿಂದೆ ಮಹಾವೀರ ಟ್ರಾವೆಲ್ಸ್ ಮಾಲೀಕ ಮಾಜಿ ಸಚಿವ ಅಭಯ ಚಂದ್ರ ಜೈನ್ ಕೈವಾಡವಿದೆ. ಪೊಲೀಸರು ಕೂಡ ಶಾಮೀಲಾಗಿದ್ದಾರೆ ಎಂದು ಅನಿಲ್ ಮನೆ ಮಂದಿ ಆರೋಪಿಸಿದ್ದಾರೆ. ಅಭಯ ಚಂದ್ರ ಜೈನ್, ಮಗ ನಾಪತ್ತೆಯಾದಾಗ ದೂರು ನೀಡಿಲ್ಲ. ಮಗನನ್ನೇ ಕಳ್ಳನಂತೆ ಬಿಂಬಿಸುವ ಪ್ರಯತ್ನ ಮಾಡಿದ್ದಾರೆ. ಸಾವಿನ ನಂತರ ಮನೆಗೂ ಭೇಟಿ ನೀಡಿಲ್ಲ ಎಂದು ಪೋಷಕರು ದೂರಿದ್ದಾರೆ.
ಪತಿ ನಾಪತ್ತೆಯಿಂದ ಕಂಗಾಲಾದ ಅನಿಲ್ ಪತ್ನಿ ಸಿಎಂಗೆ ದೂರು ನೀಡಿದ್ದರು. ಅನಿಲ್ ಕುಮಾರ್ ಗೆಳೆಯರ ಬಳಗ ಅನಿಲ್ ನಾಪತ್ತೆಯಾಗಿದ್ದಾನೆ ಹುಡುಕಿಕೊಡಿ ಅನ್ನುವ ಅಭಿಯಾನವನ್ನೇ ಆರಂಭಿಸಿದ್ದರು. ಆದರೆ ಏನು ಪ್ರಯೋಜವಾಗಿಲ್ಲ. ಅನಿಲ್ ಜೀವಂತವಾಗಿ ಮನೆ ತಲುಪಲಿಲ್ಲ.
ಸದ್ಯಕ್ಕೆ ಕೊಲೆಗಾರರು ಹಣ ಹಾಗೂ ಎಣ್ಣೆ ದೋಚುವಾಸೆಯಿಂದ ಕೊಲೆ ಮಾಡಿದರೇ, ಸಾವಿನ ಹಿಂದೆ ರಹಸ್ಯವಿದೆಯೇ? ಮಾಜಿ ಸಚಿವ ಅಭಯಚಂದ್ರ ಜೈನ್ ಪಾತ್ರವೇನು ಎಂಬೆಲ್ಲಾ ದೃಷ್ಟಿಕೋನದಲ್ಲಿ ತನಿಖೆ ಆಗಬೇಕಿದೆ ಎಂದು ಪೋಷಕರು ಆಗ್ರಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv