ಉಡುಪಿ: ಗ್ರೀನ್ ಝೋನ್ನಲ್ಲಿ ಉಡುಪಿ ಜಿಲ್ಲೆ ಇದ್ದರೂ ಮದ್ಯದಂಗಡಿಗೆ ಬ್ರೇಕ್ ಹಾಕಲಾಗಿದೆ. ಉಡುಪಿಯಲ್ಲಿ ಮದ್ಯಕ್ಕೂ ಮಧ್ಯಾಹ್ನದ ಲಗಾಮು ಹಾಕಲಾಗಿದೆ.
ನಾಳೆಯಿಂದ ರಾಜ್ಯಾದ್ಯಂತ ಮದ್ಯದಂಗಡಿ ಓಪನ್ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ. ನಿಯಮದ ಪ್ರಕಾರ ಬೆಳಗ್ಗೆ 9 ರಿಂದ ಸಂಜೆ ಏಳರವರೆಗೆ ಎಣ್ಣೆ ಶಾಪ್ಗಳು ತೆರೆದಿರಬೇಕು. ಆದರೆ ಉಡುಪಿಯಲ್ಲಿ ಮಧ್ಯಾಹ್ನ ಒಂದಕ್ಕೆ ಸೀಮಿತ ಮಾಡಲಾಗಿದೆ. ಈ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಸುಳಿವು ನೀಡಿದ್ದಾರೆ.
ನಮ್ಮ ಜಿಲ್ಲೆಯಲ್ಲಿ ಮದ್ಯವನ್ನು ಸಂಜೆಯ ತನಕ ಮಾರಾಟ ಮಾಡುವುದಿಲ್ಲ. ವೈನ್ ಶಾಪ್ ಎಂಎಸ್ಐಎಲ್ಗಳನ್ನು ಮಧ್ಯಾಹ್ನದವರೆಗೆ ಮಾತ್ರ ತೆರೆಯುತ್ತೇವೆ. ನಮ್ಮ ಜಿಲ್ಲೆಗೆ ವೈನ್ ಶಾಪ್ ಮದ್ಯದಂಗಡಿ ಮುಖ್ಯ ಅಲ್ಲ. ಜಿಲ್ಲೆಯ ಜನರ ಆರೋಗ್ಯ ನಮಗೆ ಮುಖ್ಯ. ಬ್ಯೂಟಿ ಪಾರ್ಲರ್ ಮತ್ತು ಸಲೂನ್ ಗಳನ್ನು ಒಂದು ವಾರ ಓಪನ್ ಮಾಡುವುದಿಲ್ಲ. ಸಲೂನ್ ಪಾರ್ಲರ್ ತೆರೆಯಲು ಕೇಂದ್ರ ಸರ್ಕಾರದ ಮಾರ್ಗದರ್ಶಿ ಸೂತ್ರಗಳಿವೆ ಎಂದು ತಿಳಿಸಿದರು.
ಕೇಂದ್ರದ ನಿರ್ದೇಶನ ಇದ್ದರೂ, ಜನರ ಆರೋಗ್ಯ ಕಾಪಾಡುವುದು ನಮ್ಮ ಮೊದಲ ಆದ್ಯತೆ. ಲಾಕ್ಡೌನ್ ಮುಗಿಯುವ ತನಕ ಜಿಲ್ಲೆಯಲ್ಲಿ ಯಾವುದೇ ಡೆಂಟಲ್ ಕ್ಲಿನಿಕ್ ತೆರೆಯಲ್ಲ. ರಾಜ್ಯ ಸರ್ಕಾರ ಹೇಳಿದರೂ ನಮ್ಮ ಜಿಲ್ಲೆಯಲ್ಲಿ ಒಂದು ಗಂಟೆಗೆ ಮದ್ಯದಂಗಡಿ ಬಂದ್ ಆಗುತ್ತದೆ ಎಂದು ರಘುಪತಿ ಭಟ್ ಹೇಳಿದರು.
ಅಗತ್ಯ ವಸ್ತುಗಳಿಗೆ ಒಂದು ಗಂಟೆಯೊಳಗೆ ವಿನಾಯಿತಿ ಕೊಟ್ಟು ಮದ್ಯದಂಗಡಿಯನ್ನು ಸಂಜೆಯವರೆಗೆ ತೆರೆಯುವುದು ಸರಿಯಲ್ಲ ಎಂಬ ಚರ್ಚೆ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಜನ ಪ್ರತಿನಿಧಿ ಮತ್ತು ಅಧಿಕಾರಿಗಳ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.