ಉಡುಪಿ: ಶ್ರೀಕೃಷ್ಣನಿಗೆ ಮುಂದಿನ ವರ್ಷ ಪೂಜೆ ಮಾಡುವ ಅಧಿಕಾರ ಶಿರೂರು ಮಠದ (Shiruru Mutt) ಪಾಲಾಗಲಿದೆ. ಅತಿ ಕಿರಿ ವಯಸ್ಸಿನ ಶ್ರೀಗಳ ಪರ್ಯಾಯ ಪೂರ್ವಭಾವಿ ಅಕ್ಕಿ ಮಹೂರ್ತಕ್ಕೆ ಅಷ್ಟಮಠಗಳ ಯತಿಗಳು ಮತ್ತೆ ಒಂದಾದರು. ಅಕ್ಕಿಗೆ ಪೂಜೆ ಮಾಡಿ, ಆಶೀರ್ವಾದಗೈದು ಧೈರ್ಯ ತುಂಬಿದರು.
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪುತ್ತಿಗೆ ಮಠದ ಪರ್ಯಾಯ ಮಹೋತ್ಸವ ನಡೆಯುತ್ತಿದೆ. ಮುಂದಿನ ಜನವರಿ ನಂತರ ಕೃಷ್ಣನ ಪೂಜಾಧಿಕಾರ, ಅಷ್ಟಮಠಗಳಲ್ಲೇ ಕಿರಿಯ ಶ್ರೀಗಳಾದ ಶಿರೂರು ಮಠದ ವೇದವರ್ಧನ ತೀರ್ಥ ಶ್ರೀಗಳಿಗೆ ಸಿಗಲಿದೆ. ಪರ್ಯಾಯ ಮಹೂರ್ತದ ಪೂರ್ವಭಾವಿ ಅಕ್ಕಿ ಮಹೂರ್ತವನ್ನು ಶೀರೂರು ಮಠ ಶಾಸ್ತ್ರೋಕ್ತವಾಗಿ, ಅದ್ದೂರಿಯಾಗಿ ನೆರವೇರಿಸಿತು.
ಅಷ್ಟಮಠಗಳು, ಉಡುಪಿ ದಕ್ಷಿಣ ಕನ್ನಡದ ಪ್ರಸಿದ್ಧ ತೀರ್ಥಕ್ಷೇತ್ರಗಳಿಂದ ಪ್ರಸಾದ ರೂಪದಲ್ಲಿ ಅಕ್ಕಿಯನ್ನು ಮುಡಿ ಕಟ್ಟಿ ಮೆರವಣಿಗೆ ಮೂಲಕ ಹೊತ್ತು ತರಲಾಯಿತು. ಅನಂತೇಶ್ವರ ಚಂದ್ರಮೌಳೇಶ್ವರ ಕೃಷ್ಣ ಮಠದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಿ ಅಕ್ಕಿ ಮಹೂರ್ತ ನಡೆಸಲಾಯಿತು.
ಶಿರೂರು ಲಕ್ಷ್ಮೀವರ ತೀರ್ಥ ಶ್ರೀಪಾದರ ಸಾವಿನ ನಂತರ ಉಳಿದ ಮಠಗಳು ಶಿರೂರು ಮಠದ ಜೊತೆ ಅಂತರ ಕಾಯ್ದುಕೊಂಡಿದ್ದವು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಜೊತೆಯಾಗುತ್ತಿತ್ತು. 7 ವರ್ಷದ ನಂತರ 8 ಮಠಗಳ ಸ್ವಾಮೀಜಿಗಳು ಶಿರೂರು ಮಠಕ್ಕೆ ಪ್ರವೇಶಿಸಿ ಅಕ್ಕಿ ಮಹೂರ್ತದಲ್ಲಿ ಭಾಗಿಯಾದರು. ಪರ್ಯಾಯ ಪೀಠ ಏರಲಿರುವ ಅತಿ ಕಿರಿಯ ಶ್ರೀಗಳಿಗೆ ಈ ಮೂಲಕ ಆಶೀರ್ವದಿಸಿ ಧೈರ್ಯ ತುಂಬಿದ್ದಾರೆ. ಮಠದ ಭಕ್ತರ ಜೊತೆ ನೂರಾರು ಸಾರ್ವಜನಿಕರು ಭಾಗಿಯಾಗಿದ್ದರು.