ಉಡುಪಿ: ಶ್ರೀಕೃಷ್ಣನ ಎರಡು ವರ್ಷದ ಪೂಜಾಧಿಕಾರ ಪರ್ಯಾಯ ಪಲಿಮಾರು ಮಠದ ಕೈಯಲ್ಲಿದೆ. ಜನವರಿ 18ಕ್ಕೆ ಅಧಿಕಾರ ಅದಮಾರು ಮಠದ ಪಾಲಾಗಲಿದೆ. ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಸ್ವಾಮೀಜಿ ಮುಂದಿನ ಎರಡು ವರ್ಷದ ಕೃಷ್ಣನ ಪೂಜಾಧಿಕಾರವನ್ನು ತನ್ನ ಶಿಷ್ಯನಿಗೆ ಬಿಟ್ಟುಕೊಟ್ಟಿದ್ದಾರೆ.
ಮುಂದಿನ ಎರಡು ವರ್ಷ ಪರ್ಯಾಯ ಸಿಂಹಾಸನದ ಪೀಠಾರೋಹಣವನ್ನು ಅದಮಾರು ಕಿರಿಯ ಈಶಪ್ರಿಯ ತೀರ್ಥ ಸ್ವಾಮೀಜಿ ಮಾಡಲಿದ್ದಾರೆ. ಈ ಹಿಂದೆ ಎರಡು ಬಾರಿ ಪರ್ಯಾಯ ಪೂರೈಸಿರುವ ಅದಮಾರು ಮಠದ ಶ್ರೀ ವಿಶ್ವಪ್ರಿಯ ತೀರ್ಥರು, ಅಧಿಕಾರವನ್ನು ಶಿಷ್ಯನಿಗೆ ಬಿಟ್ಟುಕೊಟ್ಟಿದ್ದಾರೆ. ಪರ್ಯಾಯ ಪುರಪ್ರವೇಶಕ್ಕೆ ಎರಡು ದಿನ ಬಾಕಿ ಇರುವಾಗ ಹಿರಿಯ ಸ್ವಾಮೀಜಿ ಈ ನಿರ್ಧಾರ ಹೊರಹಾಕಿದ್ದಾರೆ.
ಜನವರಿ 17 ಕ್ಕೆ ಪಲಿಮಾರು ಮಠದ ಪೂಜಾಧಿಕಾರ ಮುಕ್ತಾಯವಾಗಲಿದ್ದು, 18 ರ ಬೆಳಗ್ಗೆ ಮಠದ ಗರ್ಭಗುಡಿಯಲ್ಲಿ ಅಧಿಕಾರ ಹಸ್ತಾಂತರ ಆಗಲಿದೆ. ಪ್ರತಿ ಎರಡು ವರ್ಷಕ್ಕೊಮ್ಮೆ 8 ಮಠದ ನಡುವೆ ಅಧಿಕಾರ ಹಸ್ತಾಂತರ ಪ್ರಕ್ರಿಯೆ ನಡೆಯುತ್ತದೆ. ಒಮ್ಮೆ ಪೂಜಾಧಿಕಾರ ಸಿಕ್ಕಿ ಎರಡು ವರ್ಷದ ಅವಧಿ ಮುಗಿದ ಮೇಲೆ , ಮತ್ತೆ ಪರ್ಯಾಯದ ಅಧಿಕಾರ ಪ್ರಾಪ್ತಿಯಾಗಲು 14 ವರ್ಷ ಕಾಯಬೇಕು.