ಉಡುಪಿ: ನಾನು ಕಿಚ್ಚ ಸುದೀಪ್ ಅವರ ಅಭಿಮಾನಿ. ಅವರ ಪರ ಫೇಸ್ಬುಕ್ನಲ್ಲಿ ಪೋಸ್ಟ್ ಹಾಕಿದ್ದಕ್ಕೆ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸುದೀಪ್ ಅಭಿಮಾನಿ ಕೋಟ ರತ್ನಾಕರ ಪೂಜಾರಿ ಹೇಳಿಕೆ ಕೊಟ್ಟಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿದ ರತ್ನಾಕರ ಪೂಜಾರಿ, ಸುದೀಪ್ ಅವರ ಬಗ್ಗೆ ಗುರೂಜಿ ಮಾತನಾಡಿದ್ದನ್ನು ಫೇಸ್ಬುಕ್ನಲ್ಲಿ ಶೇರ್ ಮಾಡಿದ್ದೆ. ಆ ನಂತರ ಸುದೀಪ್ ಅವರಿಗೆ ಬೆಂಬಲವಾಗಿ ಬಂದ ಬರಹ, ಪೋಸ್ಟರ್ ಹಾಕಿಕೊಂಡು ಬೆಂಬಲ ನೀಡಿದ್ದೆ. ಈ ಒಂದೇ ಕಾರಣಕ್ಕೆ ನನ್ನ ಮೇಲೆ ಹಲ್ಲೆಯಾಗಿದೆ. ಕಬ್ಬಿಣದ ರಾಡ್ ನಿಂದ ನನ್ನ ಮೇಲೆ 15 ಮಂದಿ ಹಲ್ಲೆ ಮಾಡಿದ್ದಾರೆ. ಕಾಲು ಮುರಿತಕ್ಕೊಳಗಾಗಿದ್ದು, ತಲೆಗೆ ಕೊಡುತ್ತಿದ್ದ ಪೆಟ್ಟು ಕೈಗೆ ಬಿದ್ದಿದ್ದರಿಂದ ಪ್ರಾಣ ಉಳಿದಿದೆ ಎಂದು ಹೇಳಿದ್ದಾರೆ.
ಐಸಿಯುನಿಂದ ವಾರ್ಡ್ ಗೆ ಈಗ ಶಿಫ್ಟಾಗಿದ್ದೇನೆ. ನಾನು ಮಾಡಿರುವ ತಪ್ಪಾದ್ರು ಏನು? ದಯವಿಟ್ಟು ನನಗೆ ನ್ಯಾಯ ಕೊಡಿಸಿ. ತಪ್ಪು ಮಾಡಿದವರಿಗೆ ಸೂಕ್ತ ಶಿಕ್ಷೆ ಕೊಡಿಸಿ ಎಂದು ತಿಳಿಸಿದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ರತ್ನಾಕರ ಪೂಜಾರಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವೈದ್ಯರು ಐಸಿಯುನಿಂದ ಸದ್ಯ ವಾರ್ಡ್ ಗೆ ಶಿಫ್ಟ್ ಮಾಡಿದ್ದಾರೆ.
ನಡೆದಿದ್ದೇನು?
ನಟ ಸುದೀಪ್ ಬಗ್ಗೆ ಅವಧೂತ ವಿನಯ್ ಗುರೂಜಿ ಹೇಳಿದ್ದ ಮಾತು ಸುದೀಪ್ ಅಭಿಮಾನಿಗಳನ್ನು ಕೆರಳಿಸಿತ್ತು. ಅದಕ್ಕೆ ಗುರೂಜಿ ಸ್ಪಷ್ಟನೆ ಕೂಡ ಕೊಟ್ಟಿದ್ದರು. ಆದರೆ ಅಭಿಮಾನಿಗಳು ಹಾಗೂ ಗುರೂಜಿ ಬೆಂಬಲಿಗರ ಘರ್ಷಣೆ ಮಾತ್ರ ನಿಂತಿಲ್ಲ.
ಬ್ರಹ್ಮಾವರ, ಕೋಟತಟ್ಟು ಬಾರಿಕೆರೆ ನಿವಾಸಿ ರತ್ನಾಕರ ಪೂಜಾರಿ ಅವರು ನಟ ಸುದೀಪ್ ಅಭಿಮಾನಿಯಾಗಿದ್ದಾರೆ. ಈ ಹಿಂದೆ ವಿನಯ್ ಗುರೂಜಿ ಅವರು ನಟನ ಬಗ್ಗೆ ಕೆಟ್ಟದಾಗಿ ಮಾತನಾಡಿರುವುದನ್ನು ವಿರೋಧಿಸಿ ಸಾಮಾಜಿಕ ಜಾಲತಾಣದಲ್ಲಿ ಬಂದ ಸಂದೇಶವನ್ನು ರತ್ನಾಕರ್ ಅವರು ತಮ್ಮ ಫೇಸ್ ಬುಕ್ ನಲ್ಲಿ ಶೇರ್ ಮಾಡಿದ್ದರು.
ಇದರಿಂದ ಕೋಪಗೊಂಡಿದ್ದ 8-10 ಮಂದಿ ಆರೋಪಿಗಳು ಕುಂದಾಪುರ ಸಂಗಮ್ ಶಾಲೆ ಬಳಿ ರತ್ನಾಕರ್ ಅವರಿಗೆ, ಗುರೂಜಿ ಬಗ್ಗೆ ಫೇಸ್ಬುಕ್ನಲ್ಲಿ ಅವಹೇಳನ ಮಾಡುತ್ತಿಯಾ? ಎಂದು ಅವಾಚ್ಯ ಶಬ್ದಗಳಿಂದ ಬೈದು ಕಬ್ಬಿಣದ ರಾಡ್ನಿಂದ 10 ಮಂದಿ ಹಲ್ಲೆ ಮಾಡಿದ್ದರು. ಈ ಸಂಬಂಧ ಕುಂದಾಪುರ ನಿವಾಸಿ ಗುರುರಾಜ್ ಪುತ್ರನ್(28), ಸಂತೋಷ್ (30), ಪ್ರದೀಪ್(29), ರವಿರಾಜ್ ಈ ನಾಲ್ವರನ್ನು ಬಂಧಿಸಲಾಗಿದೆ.