ಉಡುಪಿ: ನಾಲ್ಕು ಗೋಡೆಗಳ ಮಧ್ಯೆ ನಡೆಯಬೇಕಿದ್ದ ಕೌಟುಂಬಿಕ ಜಗಳ ಬೀದಿಗೆ ಬಂದಿದ್ದು, ಉಡುಪಿ ಜಿಲ್ಲೆ ಹೆಬ್ರಿ ಪೇಟೆಯಲ್ಲಿ ಒಂದೇ ಕುಟುಂಬದ ಸಂಬಂಧಿಗಳು ಬಟ್ಟೆ ಹರಿದುಕೊಂಡು ಜಗಳ ಕಾದಿದ್ದಾರೆ.
ಹೆಬ್ರಿ ಬಸ್ ಸ್ಟ್ಯಾಂಡ್ ಸಮೀಪ ನಡೆದ ಫ್ಯಾಮಿಲಿ ಡ್ರಾಮ ಈಗ ಜಗಜ್ಜಾಹೀರಾಗಿದೆ. ಮೊಬೈಲ್ನಲ್ಲಿ ಮೆಸೇಜ್ ಕಳುಹಿಸುವ ವಿಚಾರಕ್ಕೆ ಆರಂಭವಾದ ಜಗಳ ಕುಟುಂಬದ ಸದಸ್ಯರ ನಡುವೆ ಹೊಡೆದಾಟಕ್ಕೆ ಕಾರಣವಾಗಿದೆ. ಆರಂಭದಲ್ಲಿ ಈ ಹೈಡ್ರಾಮಾವನ್ನು ಸುತ್ತಮುತ್ತಲಿನ ಜನ ನಿಂತು ನೋಡಿದರೆ ಹೊಡೆದಾಟ ಆರಂಭವಾಗಿ ಯುವಕನ ಅಂಗಿ ಹರಿಯುತ್ತಿದ್ದಂತೆ ಸಾರ್ವಜನಿಕರು ಕೂಡ ಮಧ್ಯಪ್ರವೇಶ ಮಾಡಿದ್ದಾರೆ.
ಮಿಥುನ್ ಸ್ಥಳೀಯ ಬಿಜೆಪಿ ಮುಖಂಡನಾಗಿದ್ದು, ಜಗಳದಲ್ಲಿ ಖಾಸಗಿ ವಿಚಾರಗಳು ಪ್ರಸ್ತಾಪವಾಗಿದ್ದು ಅವಾಚ್ಯ ಪದಗಳಿಂದ ಎರಡು ಕಡೆಯವರು ಬೈದುಕೊಂಡಿದ್ದಾರೆ. ಸಾರ್ವಜನಿಕರು ಎಷ್ಟು ತಿಳಿ ಹೇಳಿದರೂ ಮಾತಿನ ಚಕಮಕಿ ಮತ್ತು ಬೈಗುಳ ನಿಲ್ಲಲೇ ಇಲ್ಲ. ಸಾಮಾಜಿಕ ಹೋರಾಟಗಾರರು- ಕೆಲ ಸಂಘಟನೆಯ ಮುಖಂಡರು ಸ್ಥಳಕ್ಕೆ ಆಗಮಿಸಿದ ನಂತರ ಕುಟುಂಬದ ಸದಸ್ಯರ ನಡುವಿನ ಜಗಳ ಕೊಂಚ ಕಡಿಮೆಯಾಗಿದೆ. ಆಮೇಲೆ ರಾಜಿಯಾಗಿದೆ.
ಒಂದೇ ಕುಟುಂಬದ ಬೀದಿರಂಪ ಸ್ಥಳೀಯರ ಮೊಬೈಲ್ನಲ್ಲಿ ನೆರೆಸಯಾಗಿದ್ದು ಸದ್ಯ ವಾಟ್ಸಪ್ ಫೇಸ್ಬುಕ್ನಲ್ಲಿ ಹರಿದಾಡುತ್ತಿದೆ. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ. ಪೊಲೀಸರು ಬರುವ ಮೊದಲೇ ಗಲಾಟೆ ಮಾಡಿದವರು ಕಾಲ್ಕಿತ್ತಿದ್ದಾರೆ.