ಉಡುಪಿ: ಕರಾವಳಿ ಭಾಗದಲ್ಲಿ ದೈವಾರಾಧನೆಗೆ ವಿಶೇಷ ಮಹತ್ವವಿದೆ. ಗುಳಿಗ ದೈವದ ಕೋಲವಂತೂ ವಿಶೇಷ ಆಕರ್ಷಣೆ. ಗುಳಿಗ ದೈವದ ರೋಷಾವೇಷ ನೋಡೋದೇ ಒಂದು ರೋಮಾಂಚಕ. ರೋಷದಿಂದ ನುಗ್ಗುವ ದೈವವನ್ನು ಹಿಡಿಯಲೆಂದೇ ಸಾವಿರಾರು ಭಕ್ತರು ದೈವಾರಾಧನೆಯ ವೇಳೆ ಸೇರುತ್ತಾರೆ. ಆದ್ರೆ ಜನರಿಂದ ತಪ್ಪಿಸಿಕೊಂಡು ದೈವರ ಮರವೇರಿದ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿದೆ.
ಉಡುಪಿ ಜಿಲ್ಲೆ ಶಂಕರಪುರದ ಶಿವಾನಂದ ನಗರದಲ್ಲಿರುವ ಬಬ್ಬುಸ್ವಾಮಿ ದೇವಸ್ಥಾನ ಹಾಗೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಈ ಘಟನೆ ನಡೆದಿದೆ. ಈ ಗುಳಿಗಾರಾಧನೆಯ ವಿಡಿಯೋ ಇದೀಗ ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿದೆ.
ಇಲ್ಲಿನ ಗುಳಿಗ ದೈವದ ಅಬ್ಬರ ಅದು ಹೇಗಿತ್ತೆಂದರೆ, ಅಲ್ಲಿ ಸೇರಿದ ಜನರಿಗೆ ದೈವವನ್ನು ಹಿಡಿಯಲು, ತಡೆಯಲು ಸಾಧ್ಯವೇ ಆಗಿಲ್ಲ. ಜನರಿಂದ ತಪ್ಪಿಸಿಕೊಂಡ ದೈವ ಅಲ್ಲೇ ಪಕ್ಕದಲ್ಲಿದ್ದ ಬೃಹದಾಕಾರದ ಮರ ಏರಿಯೇ ಬಿಟ್ಟಿತ್ತು. ಭಕ್ತರು ಎಷ್ಟೇ ಮನವಿ ಮಾಡಿದರೂ ಕೆಳಗಿಳಿಯಲೇ ಇಲ್ಲ. ಕೆಲ ಕಾಲ ಮರದಲ್ಲೇ ನರ್ತನ, ದರ್ಶನ ಪೂರೈಸಿ ಕೆಳಗಿಳಿಸಬೇಕಾದರೆ ಭಕ್ತರು ಸುಸ್ತಾಗಿ ಹೋದರು.
ಗುಳಿಗ ದೈವವು ನರ್ತನದ ವೇಳೆ, ಗುಂಪಿನಿಂದ ಹಾರಿ ಹೊರ ಹೋಗೋವುದು ಮತ್ತು ಹೊರಹೋಗದಂತೆ ಭಕ್ತರು ತಡೆಯೋದನ್ನು ನೋಡೋದೇ ಒಂದು ರೋಮಾಂಚಕ ಅನುಭವ. ಗುಳಿಗ ದೈವದ ಆರಾಧನೆಗೆ ಈ ಕಾರಣದಿಂದಲೇ ವಿಶೇಷ ಮಹತ್ವ ಪಡೆದುಕೊಂಡಿದೆ. ಕರಾವಳಿ ಜನತೆ ಭಕ್ತಿ ಭಾವದಿಂದ ಗುಳಿಗನನ್ನು ಆರಾಧಿಸುತ್ತಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv