ಉಡುಪಿ: ಕಾಂಗ್ರೆಸ್ ಅನ್ನು ಸೊಳ್ಳೆಗೆ ಹೋಲಿಸಿದ ಮೈಸೂರು ಸಂಸದ ಪ್ರತಾಪ್ ಸಿಂಹಗೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ತಿರುಗೇಟು ಕೊಟ್ಟಿದ್ದಾರೆ.
ಉಡುಪಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರತಾಪ್ ಸಿಂಹ ಅಪ್ಪಿತಪ್ಪಿ ಎಂಪಿ ಆಗಿದ್ದಾರೆ ಎಂದು ಕಿಡಿಕಾರಿದರು. ಅನವಶ್ಯಕವಾಗಿ ಬಿಜೆಪಿ ನಾಯಕರು ಮಾತನಾಡುತ್ತಾರೆ. ಗಲಾಟೆ ಸೃಷ್ಟಿಯಾಗಬೇಕು ಎಂಬ ಉದ್ದೇಶ ಇವರದ್ದು. ಸಿ.ಟಿ.ರವಿ, ಪ್ರತಾಪ್ ಸಿಂಹ, ಸುನಿಲ್ ಕುಮಾರ್, ಶೋಭಾ, ಸುರೇಶ್ ಅಂಗಡಿ ಒಂದೇ ವರ್ಗದವರು. ಇವರೆಲ್ಲಾ ಬೆಂಕಿ ಹಚ್ಚುವ ಗುಂಪಿನವರು. ಪ್ರತಾಪ್ ಸಿಂಹ ಎಲ್ಲಿಂದನೂ ಬಂದು ಅಪ್ಪಿತಪ್ಪಿ ಎಂಪಿ ಆಗಿದ್ದಾರೆ. ಪ್ರಚೋದನಕಾರಿ ಮಾತು ಆಡುತ್ತಾರೆ ಎಂದು ಚಾಟಿ ಬೀಸಿದರು.
ಅವರ ಭಾಷೆಗಳೇ ಆ ರೀತಿ ಇದೆ. ತೇಜಸ್ವಿ ಸೂರ್ಯ, ಸುರೇಶ್, ಸಿ.ಟಿ ರವಿ ಮೇಲೆ ದೂರು ನೀಡಿದ್ದೇವೆ. ಪ್ರತಾಪ್ ಸಿಂಹ ಸೊಳ್ಳೆ ಹೇಳಿಕೆಗೆ ದೂರು ನೀಡುತ್ತೇವೆ. ಪ್ರಚೋದನೆ ಕೊಡುವವರ ವಿರುದ್ಧ ದೂರು ದಾಖಲಾಗಬೇಕು ಎಂದು ತಿಳಿಸಿದರು.