ಉಡುಪಿ: ಪಾಕ್ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ ಎಂದು ಪ್ರಶ್ನಿಸುವ ಮೂಲಕ ಪ್ರವಾಸೋದ್ಯಮ ಸಚಿವ ಸಿ.ಟಿ ರವಿ ವಿವಾದತ್ಮಕ ಹೇಳಿಕೆ ನೀಡಿದ್ದಾರೆ.
ಕಾರ್ಕಳ ತಾಲೂಕಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪಾಕಿಸ್ತಾನ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ? ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡ್ತೀರಾ? ಈ ಮಾನಸಿಕತೆ ಬಹಳ ಡೇಂಜರ್ ಎಂದು ಅವರು ಗುಡುಗಿದರು.
ಅಮೂಲ್ಯಳ ಹಿಂದೆ ಒಂದು ತಂಡವೇ ಇದೆ. ಸ್ವತಃ ಅಮೂಲ್ಯಳೇ ಈ ವಿಷಯ ಬಹಿರಂಗಪಡಿಸಿದ್ದಾಳೆ. ಬೆಂಗಳೂರು ಸಿಎಎ ಹೋರಾಟ ಪ್ರಕರಣವನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ. ಬೇರೆ ಎಲ್ಲದಕ್ಕೂ ಶಿಕ್ಷೆ ಹಾಗೂ ಕ್ಷಮೆ ಇದೆ. ದೇಶದ್ರೋಹದ ಚಟುವಟಿಕೆಗೆ ಪಾಕ್ ಜಿಂದಾಬಾದ್ ಅಂದೋರಿಗೆ ಕ್ಷಮೆ ಇಲ್ಲ. ಘೋಷಣೆ ಕೂಗಿದವರು ಕ್ಷಮಿಸಿ ಎಂದು ಯಾರು ಕೇಳಬಾರದು. ಇಂತಹ ಮಾನಸಿಕತೆಯೇ ಬಹಳ ಅಪಾಯಕಾರಿ ಎಂದು ಹೇಳಿದರು.
ಇದೇ ವೇಳೆ ದೇಶದೊಳಗೆ ಇಂತಹವರು ಓಡಾಡುತ್ತಿದ್ದರೆ, ನಮ್ಮ ದೇಶದ ಸೈನಿಕರು ಗಡಿಯಲ್ಲಿ ಯಾಕೆ ಗುಂಡಿಗೆ ಬಲಿಯಾಗಬೇಕು. ಹಿಮಾಲಯದ ಮೈನಸ್ 20 ಡಿಗ್ರಿಯಲ್ಲಿ ಯಾಕೆ ದೇಶ ಕಾಯಬೇಕು. ವಿರೋಧ ರಾಷ್ಟ್ರದ ಶತ್ರುಗಳ ಗುಂಡಿಗೆ ಯಾಕೆ ಬಲಿಯಾಗಬೇಕು ಎಂದು ಪ್ರಶ್ನೆ ಮಾಡಿದರು.