ಉಡುಪಿ: ಮಹಾಮಾರಿ ಕೊರೊನಾ ವಿರುದ್ಧ ಕೇಂದ್ರ ಹಾಗೂ ರಾಜ್ಯ ಸರ್ಕಾರ ಖಡಕ್ ಸೂಚನೆಗಳನ್ನು ಜನತೆಗೆ ಕೊಟ್ಟಿದೆ. ಉಡುಪಿ ಜಿಲ್ಲೆ ಶೇ.95 ರಷ್ಟು ಇದನ್ನು ಪಾಲಿಸಿದೆ. ಆದರೆ ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಸರ್ಕಾರದ ಆದೇಶವನ್ನು ಸಮುದ್ರದ ಗಾಳಿಗೆ ತೂರಿಬಿಡಲಾಗಿದೆ ಎಂಬ ಪ್ರಶ್ನೆ ಕೇಳಿಬರುತ್ತಿದೆ.
ಕಳೆದ ನಾಲ್ಕು ದಿನಗಳಿಂದ ಉಡುಪಿಯಲ್ಲಿ ಸೆಕ್ಷನ್ ವಿಧಿಸಲಾಗಿದೆ. ಜನ ಹೊರಗೆ ಬರದೆ ಸರ್ಕಾರದ ಆದೇಶವನ್ನು ಪಾಲಿಸಿ ಜನ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ. ಆದರೆ ಮಲ್ಪೆ ಬಂದರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಾ ಇದೆ. ಇಂದು ಕೂಡ ಐದು ಸಾವಿರ ಜನರಿಂದ ಒಂದೇ ಕಡೆ ವಹಿವಾಟು ನಡೆದಿದೆ. ವಹಿವಾಟು ಮಾಡುವ ಸಂದರ್ಭ ಮೀನುಗಾರರು ಕಾರ್ಮಿಕರು ಮಾಲೀಕರು ಯಾರೂ ಕೂಡ ಮುನ್ನೆಚ್ಚರಿಕೆ ವಹಿಸಿಲ್ಲ. ಮಾಸ್ಕ್ ಹಾಕಿಲ್ಲ. ಒಬ್ಬರೊಬ್ಬರ ನಡುವೆ ಅಂತರ ಕಾಯ್ದುಕೊಂಡಿಲ್ಲ ಶುಚಿತ್ವವನ್ನು ವಹಿಸಿಲ್ಲ.
ರಾಜ್ಯ ಸರ್ಕಾರ ಕಳೆದ ರಾತ್ರಿ ಸುತ್ತೋಲೆ ಹೊರಡಿಸಿದ್ದು ಅಗತ್ಯ ವಸ್ತುಗಳ ಜೊತೆ ಮೀನು ಮತ್ತು ಮಾಂಸವನ್ನು ಕೂಡ ಸೇರಿಸಿತ್ತು. ಹೀಗಾಗಿ ಮೀನಿಗೆ ವಿನಾಯಿತಿ ಕೊಟ್ಟದ್ದೇ ತಪ್ಪಾಯ್ತಾ ಎಂಬ ಪ್ರಶ್ನೆ ಈಗ ಕಾಡುತ್ತಿದೆ. ಇಡೀ ಕರ್ನಾಟಕ ಶಟ್ ಡೌನ್ ಆದ್ರೂ ಉಡುಪಿಯ ಮಲ್ಪೆ ಬಂದರಲ್ಲಿ ಬಿಂದಾಸ್ ಬ್ಯುಸಿನೆಸ್ ನಡೆಯುತ್ತಿದೆ. ಕೇರಳ, ತಮಿಳುನಾಡು, ಈಶಾನ್ಯ ರಾಜ್ಯದ ಕಾರ್ಮಿಕರು ಮಲ್ಪೆಯಲ್ಲಿ ತುಂಬಿಕೊಂಡಿದ್ದಾರೆ. ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದೆ ವ್ಯವಹಾರ ಮಾಡಲಾಗುತ್ತಿದೆ.
ಸರ್ಕಾರದ ಕಫ್ರ್ಯೂ ಕಾನೂನು ಸಮುದ್ರದ ಗಾಳಿಗೆ ತೂರಿ ಬಿಡಲಾಗಿದೆ. ಬಂದರಲ್ಲಿ ಐದು ಸಾವಿರ ಜನ ವಹಿವಾಟು ನಡೆಸುತ್ತಿದ್ದು, ಮೀನಿಗೆ ಸರ್ಕಾರ ವಿನಾಯಿತಿ ಕೊಟ್ಟದ್ದೇ ತಪ್ಪಾಯ್ತಾ ಅಂತ ತನ್ನ ಸಮಾಜದ ಬಗ್ಗೆ ಅತಿಯಾದ ಕಾಳಜಿ ಇರುವ ಮೀನುಗಾರ ಮುಖಂಡರೊಬ್ಬರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ನೋವು ವ್ಯಕ್ತಪಡಿಸಿದರು.
ಕಳೆದ ಹದಿನೈದು ದಿವಸದಿಂದ ಆರೋಗ್ಯ ಇಲಾಖೆ ಜಿಲ್ಲಾಡಳಿತ ಜನರಿಗೆ ಕೊರೊನಾ ಬಗ್ಗೆ ಜನ ಜಾಗೃತಿ ಮೂಡಿಸುತ್ತಾ ಇದೆ. ಮೀನುಗಾರರಿಗೆ ಜಿಲ್ಲಾಡಳಿತ ಕೊರೊನಾ ಕ್ಲಾಸ್ ಕೊಡುವಲ್ಲಿ ವಿಫಲವಾಗಿದ್ಯಾ ಅನ್ನೋ ಪ್ರಶ್ನೆ ಕೇಳಬೇಕಾಗುತ್ತದೆ. ಜೀವನವನ್ನು ಸಮುದ್ರದಲ್ಲಿ ಕಳೆಯುವ ಬೆಳಗ್ಗಿನಿಂದ ಸಂಜೆಯ ತನಕ ಮೀನಿನ ಬುಟ್ಟಿ ಜೊತೆ ಬದುಕುವ ಕಡಲ ಮಕ್ಕಳಿಗೆ ಮಹಾಮಾರಿ ಕೋರೋಣ ಹಬ್ಬುವ ರೀತಿ, ಹಬ್ಬಿದ ನಂತರ ಸಂಭವಿಸುವ ಆಪತ್ತು ಏನು ಅನ್ನುವ ಬಗ್ಗೆ ಇನ್ನು ಗಮನಕ್ಕೆ ಬಂದಿಲ್ಲ. ಮೊಗವೀರ ಯುವಕರಿಗೆ ಮಹಿಳೆಯರಿಗೆ ಮತ್ತು ವಹಿವಾಟು ನಡೆಸುವವರಿಗೆ ಕೊರೊನಾ ವೈರಸ್ ನ ಭೀಕರತೆಯ ಪಾಠ ಮಾಡುವ ಅಗತ್ಯ ಇದೆ.