ಉಡುಪಿ: ಕೊರೊನಾ ಭೀತಿಯ ನಡುವೆ ಖಾಸಗಿ ಆಸ್ಪತ್ರೆ ಮತ್ತು ಕ್ಲಿನಿಕ್ ಮುಚ್ಚಿರುವ ವೈದ್ಯರು ಮತ್ತು ಮಾಲೀಕರ ವಿರುದ್ಧ ಉಡುಪಿ ಡಿಸಿ ಗರಂ ಆಗಿದ್ದಾರೆ. ಆಸ್ಪತ್ರೆಗಳಲ್ಲಿ ಇತರ ಚಿಕಿತ್ಸೆಗಳು ಸರಿಯಾಗಿ ಸಿಗುತ್ತಿಲ್ಲ ಎಂದು ಸಾರ್ವಜನಿಕರಿಂದ ದೂರುಗಳು ಬಂದಿದ್ದವು.
ಲಾಕ್ ಡೌನ್ ಆದ ನಂತರ ಉಡುಪಿಯಲ್ಲೂ ಕೆಲವು ಖಾಸಗಿ ಕ್ಲಿನಿಕ್ ಮತ್ತು ನರ್ಸಿಂಗ್ ಹೋಮ್ ಗಳು ಮುಚ್ಚಿತ್ತು. ಸರ್ಕಾರ ನಿರ್ದೇಶನ ನೀಡಿದ್ರೂ ಕ್ಲಿನಿಕ್ ತೆರೆದಿರಲಿಲ್ಲ. ನಾನಾ ಆರೋಗ್ಯ ಸಮಸ್ಯೆಗಳಿಂದ ಬಳಲುವವರು ಪರದಾಡುವಂತಾಗಿತ್ತು. ಈ ಬಗ್ಗೆ ಉಡುಪಿ ಡಿ.ಸಿ. ಖಡಕ್ ವಾರ್ನಿಂಗ್ ನೀಡಿದ್ದಾರೆ. ಮುಚ್ಚಲಾಗಿರುವ ಕ್ಲಿನಿಕ್ ಮತ್ತು ಆಸ್ಪತ್ರೆಗಳನ್ನು ತಕ್ಷಣವೇ ತೆರೆಯಬೇಕು. ಈಗ ಜನರಿಗೆ ನಿಮ್ಮ ಆರೋಗ್ಯ ಸೇವೆಯ ಅಗತ್ಯವಿದೆ ಎಂದಿದ್ದಾರೆ.
ಪರಿಸ್ಥಿತಿ ಹದಗೆಟ್ಟಿರುವಾಗ ನರ್ಸಿಂಗ್ ಹೋಮ್ ಗಳನ್ನು ಮುಚ್ಚಿಟ್ಟಿರುವುದು ಸರಿಯಲ್ಲ. ಹಾಗಾಗಿ ಕೂಡಲೇ ಆಸ್ಪತ್ರೆಗಳನ್ನು ತೆರೆದು ಸಾರ್ವಜನಿಕರ ಸೇವೆಗೆ ಸಿದ್ಧವಾಗಬೇಕು ಎಂದು ಸೂಚನೆ ಕೊಟ್ಟಿದ್ದಾರೆ. ಒಂದು ವೇಳೆ ಆದೇಶ ಪಾಲಿಸದಿದ್ದರೆ ಕೆಪಿಎಂಎ ಆಕ್ಟ್ ಪ್ರಕಾರ ಲೈಸನ್ಸ್ ರದ್ದು ಗೊಳಿಸುತ್ತೇವೆ. ಆಸ್ಪತ್ರೆಗಳಿಗೆ ಜಿಲ್ಲಾಡಳಿತದಿಂದ ನೀಡಲಾಗಿರುವ ಲೈಸೆನ್ಸ್ ರದ್ದು ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.