ಉಡುಪಿ: ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಮೂಲ್ಯ ವಿರುದ್ಧ ಭಜರಂಗದಳ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬರು ಪಾಕ್ ಪರ ಒಲವುಳ್ಳವರು ಎಂದು ಆರೋಪಿಸಿದೆ.
ಮಾಧ್ಯಮಗಳ ಜೊತೆ ಮಾತನಾಡಿದ ಭಜರಂಗದಳದ ರಾಜ್ಯ ಸಂಚಾಲಕ ಸುನೀಲ್ ಕೆ.ಆರ್, ಅಮೂಲ್ಯ ಕೇವಲ ಒಂದು ಮುಖವಷ್ಟೇ. ಸಿಎಎ ವಿರೋಧಿಸುವ ಪ್ರತಿಯೊಬ್ಬರೂ ಪರೋಕ್ಷವಾಗಿ ಪಾಕ್ ಪರ ಒಲವುಳ್ಳವರೇ ಆಗಿದ್ದಾರೆ. ನಮ್ಮ ದೇಶದ ಅನ್ನವುಂಡು ಶತ್ರು ದೇಶಕ್ಕೆ ಜಯಕಾರ ಕೂಗುವ ಇಂತವರನ್ನು ಗಡಿಪಾರು ಮಾಡಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಎಎ ಹೋರಾಟಗಾರರಿಗೆ ಹಣ ಸರಬರಾಜು ಮಾಡುವವರು ಮತ್ತು ಇವರನ್ನು ಈ ಕೃತ್ಯಕ್ಕೆ ಬಳಸಿಕೊಳ್ಳುತ್ತಿರುವವರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಘಟನೆಯನ್ನು ಖಂಡಿಸಿ ರಾಜ್ಯಾದ್ಯಂತ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸುವಂತೆ ಕಾರ್ಯಕರ್ತರಿಗೆ ಸುನೀಲ್ ಕೆ.ಆರ್ ಕರೆ ನೀಡಿದ್ದಾರೆ.