ಉಡುಪಿ: ಹಿಂದೂಸ್ಥಾನ್ ಜಿಂದಾಬಾದ್ ಘೋಷಣೆ ಕೂಗುವ ಮೂಲಕ ದೇಶದ್ರೋಹಿ ಅಮೂಲ್ಯ ಲಿಯೋನಾಗೆ ಪತ್ರಕರ್ತ ರಾ. ಚಿಂತನ್ ಟಾಂಗ್ ಕೊಟ್ಟಿದ್ದಾರೆ. ಉಡುಪಿಯ ಕಾಪುವಿನಲ್ಲಿ ಪೌರತ್ವ ಕಾಯ್ದೆ ವಿರುದ್ಧ ಬೆಳಪು ಮಲ್ಲಾರ್ ಮುಸ್ಲಿಂ ಒಕ್ಕೂಟ ಆಯೋಜಿಸಿದ್ದ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವಿವೇಕ ಇಲ್ಲದವರಿಗೆ ಯಾವುದೇ ಕಾರಣಕ್ಕೂ ವೇದಿಕೆಯನ್ನು ಕೊಡಬಾರದು. ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಟೆರರಿಸ್ಟ್ ರಾಷ್ಟ್ರದ ಘೋಷಣೆ ಮೊಳಗುತ್ತದೆ. ಅಮೂಲ್ಯ ಲಿಯೋನ ಬಂದಿದ್ದರೆ ನಾನು ಬರುತ್ತಿರಲಿಲ್ಲ. ಅಮೂಲ್ಯ ಉದ್ದೇಶ ಏನೇ ಇರಲಿ. ನಾಲಿಗೆಗೆ ಹಿಡಿತ ಇರಬೇಕು. ವಿರೋಧಿ ದೇಶದ ಪರ ಜೈಕಾರ ಕೂಗುವವರಿಗೆ ವೇದಿಕೆ ಕೊಡಬಾರದು. ಫ್ರೀಡಂ ಪಾರ್ಕ್ ಹೇಳಿಕೆ ಎಲ್ಲರೂ ಖಂಡಿಸಲೇಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಪಾಕ್ ಪರ ಘೋಷಣೆ ಪ್ರಕರಣ- ಪೊಲೀಸರ ಪ್ರಶ್ನೆಗೆ ಕಾರ್ಪೊರೇಟರ್ ಸುಸ್ತೋ ಸುಸ್ತು
ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಅವರು, ಮಾತನಾಡಿದರೆ, ಕವನ ಹೇಳಿದ್ರೆ ಕೇಸ್ ಬೀಳುತ್ತದೆ. ಪ್ರಧಾನಿ ಮೋದಿ ಅವತಾರ ಪುರುಷ – ಮೋದಿ ಬಂದ್ಮೇಲೆ ಎಲ್ಲರೂ ಒಗ್ಗಟ್ಟಾಗಿದ್ದಾರೆ. ಪ್ರಧಾನಿ ಮೋದಿ ಅವರಿಗೆ ಅಭಿನಂದನೆ ಸಲ್ಲಿಸ್ತೇನೆ ಎಂದು ವ್ಯಂಗ್ಯವಾಡಿದರು. ದೇಶ ಇಬ್ಬಾಗ ಮಾಡಿ ಹಿಂದೂ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದೆ. ಪೌರತ್ವ ಕಾಯ್ದೆ ಎಲ್ಲಾ ಧರ್ಮ, ಜಾತಿ ಜನರಿಗೆ ಬಿಸಿ ತುಪ್ಪ ಆಗಲಿದೆ ಎಂದರು. ಇದನ್ನೂ ಓದಿ: ಅಮೂಲ್ಯಳನ್ನು ಕಾರ್ಯಕ್ರಮದಿಂದ ಕೈಬಿಟ್ಟ ಆಯೋಜಕರು- ವಿಮಾನ ಟಿಕೆಟ್ ರದ್ದು
ಮಾಧ್ಯಮದವರು ಪೂರ್ವಾಗ್ರಹ ಪೀಡಿತರಾಗಬಾರದು. ಸಂಸದೆ ಸಾಧ್ವಿ ಪ್ರಜ್ಞಾಸಿಂಗ್ ಬಗ್ಗೆ ಒಂದು ವಾರ ಸುದ್ದಿ ಮಾಡಿ. ಜೈ ಗೋಡ್ಸೆ ಅಂದ ಸಾಧ್ವಿ ಬಗ್ಗೆ ಮಾಧ್ಯಮ ಪ್ರೋತ್ಸಾಹ ಕೊಟ್ಟದ್ಯಾಕೆ ಎಂದು ಪ್ರಶ್ನಿಸಿದರು. ಭಾರತಕ್ಕೆ ಟ್ರಂಪ್ ಭೇಟಿ ಹಿನ್ನೆಲೆಯಲ್ಲಿ ಗುಜರಾತಲ್ಲಿ 100 ಕೋಟಿಯ ಗೋಡೆಯನ್ನು ಸ್ಲಂಗೆ ಅಡ್ಡಲಾಗಿ ಕಟ್ಟಲಾಗುತ್ತಿದೆ. ಗೋಡೆ ಕಟ್ಟುವ ಬದಲು ಬಡವರಿಗೆ ಮನೆ ಕಟ್ಟಿಕೊಡಿ. ಧರ್ಮದ ನಡುವೆ ವ್ಯಾಪಾರ ಯುದ್ಧ ಬೇಡ. ಹಿಂದೂ ಮುಸಲ್ಮಾನರು ಅಣ್ಣತಮ್ಮಂದಿರಂತೆ ಬದುಕಬೇಕು. ಪೌರತ್ವ ದಾಖಲೆ ಕೇಳಲು ಬಂದವರಿಗೆ ರಾಷ್ಟ್ರಧ್ವಜ ತೋರಿಸಿ ಎಂದು ಪ್ರತಿಭಟನಾ ಸಭೆಯಲ್ಲಿ ಸಲಹೆ ನೀಡಿದರು.