ಉಡುಪಿ: ಕರಾವಳಿಯ ಓಟದ ಜಿದ್ದಿನ ಕಂಬಳ ಆರಂಭಕ್ಕೂ ಮುನ್ನ ದೇವರ ಕಂಬಳ ಶುರುವಾಗಿದೆ. ಉಡುಪಿ ಜಿಲ್ಲೆಯ ಪ್ರಸಿದ್ಧ ಕಂಬಳಗಳಲ್ಲಿ ಒಂದಾದ ಯಡ್ತಾಡಿ ಕಂಬಳವು ಭರ್ಜರಿ ಕೋಣಗಳ ಓಟದ ನಡುವೆ ನಡೆಯಿತು.
ಬ್ರಹ್ಮಾವರ ತಾಲೂಕು ವ್ಯಾಪ್ತಿಗೆ ಬರುವ ಯಡ್ತಾಡಿ ಕಂಬಳವು ಐತಿಹಾಸಿಕ ಪ್ರಾಮುಖ್ಯತೆಯನ್ನು ಪಡೆದಿರುವ ಕಂಬಳವಾಗಿದೆ. ವಂಡಾರು ಕಂಬಳವೆಂದೇ ಇದು ಪ್ರಸಿದ್ಧಿ. ಕೆಲವು ವರ್ಷಗಳ ಹಿಂದೆ ಪೇಟಾ ಹೋರಾಟದ ಹಿನ್ನೆಲೆಯಲ್ಲಿ ಕಂಬಳಕ್ಕೆ ನಿಷೇಧ ಹೇರಿದ್ದರಿಂದ ಯಡ್ತಾಡಿ ಕಂಬಳವು ಸಂಪ್ರದಾಯಕ್ಕೆ ಮಾತ್ರ ಸೀಮಿತವಾಗಿತ್ತು.
ಸ್ಥಳೀಯ ಕಂಬಳ ಆಸಕ್ತ ಹರೀಶ್ ಶೆಟ್ಟಿ ಮಾತನಾಡಿ, ಓಟದ ಕಂಬಳ ಆರಂಭಕ್ಕೆ ಮುನ್ನ ದೇವರ ಕಂಬಳ ನಡೆಯುತ್ತಿತ್ತು. ನಮ್ಮಲ್ಲಿ ಸಾಂಪ್ರದಾಯಿಕ ಆಚರಣೆ ಮಾತ್ರ ಇದೆ. ಸ್ಪರ್ಧಾ ಕಂಬಳ ಇಲ್ಲ. ಹಾಗಾಗಿ ಜಿಲ್ಲೆಯ ಹೊರ ಜಿಲ್ಲೆಯ ಕೋಣಗಳು ಬರುತ್ತವೆ ಎಂದು ಹೇಳಿದರು.
ಈ ಬಾರಿ ಕಂಬಳಕ್ಕೆ ಯಾವುದೇ ಅಡೆತಡೆಗಳು ಇರಲಿಲ್ಲದ ಹಿನ್ನೆಲೆಯಲ್ಲಿ ಕಂಬಳವು ಸಾಂಗವಾಗಿ ನಡೆದಿದೆ. ವಿಶೇಷವಾಗಿ ಮುಂಜಾನೆ ಧಾರ್ಮಿಕ ವಿಧಿಗಳ ಬಳಿಕ ಕೋಣಗಳನ್ನು ಕಂಬಳ ಗದ್ದೆಗೆ ಇಳಿಸಲಾಯಿತು. ಹರಕೆಗಾಗಿ ಆಗಮಿಸಿದ್ದ ಕೋಣಗಳನ್ನು ಕಂಬಳ ಗದ್ದೆಗೆ ಇಳಿಸಿ ಹರಕೆ ತೀರಿಸಲಾಯಿತು.