ಉಡುಪಿ: ಜೀವನದಲ್ಲಿ ಒಂದು ಬಾರಿ ನಡೆಯುವ ಮದುವೆ ಡಿಫರೆಂಟ್ ಆಗಿರಬೇಕು. ಸದಾ ನೆನಪಲ್ಲಿ ಉಳಿಯುವಂತೆ ಆಗಬೇಕು ಅನ್ನೋದು ಎಲ್ಲರ ಕನಸು. ಅದಕ್ಕೆ ಹಲವಾರು ಕಸರತ್ತುಗಳನ್ನು ಮಾಡಲಾಗುತ್ತದೆ. ಬೆಂಗಳೂರಿನ ವಿಜಯ್ ಮತ್ತು ಉಡುಪಿಯ ನಿವೇದಿತಾ ಮದುವೆ ಇನ್ವಿಟೇಷನ್ ನಲ್ಲಿ ಹೊಸತನ ಮತ್ತು ಕಾಳಜಿ ತೋರಿದ್ದಾರೆ.
ವಿಜಯ್ ಮತ್ತು ನಿವೇದಿತಾ ಇದೇ ಭಾನುವಾರ ಉಡುಪಿಯಲ್ಲಿ ಹಸೆಮಣೆಯೇರಿ ಸತಿಪತಿಗಳಾಗುತ್ತಿದ್ದಾರೆ. ಅವರ ಮದುವೆ ಆಮಂತ್ರಣ ಫುಲ್ ಡಿಫರೆಂಟ್ ಆಗಿದೆ. ಮದುವೆಯ ಆಮಂತ್ರಣ ಪತ್ರಿಕೆಯ ಮೂಲಕ ಪರಿಸರ ಕಾಳಜಿ ತೋರಿದ್ದಾರೆ. ಬೆಂಗಳೂರಿನ ನಿವಾಸಿಯಾಗಿರುವ ವಿಜಯ್ ಪಿ. ಹಂದೆ ಮತ್ತು ಉಡುಪಿಯ ನಿವಾಸಿ ನಿವೇದಿತಾ ಅವರು ನವೆಂಬರ್ 24 ರಂದು ಉಡುಪಿಯಲ್ಲಿ ಮದುವೆ ಬಂಧನಕ್ಕೊಳಗಾಗಲಿದ್ದಾರೆ. ಪರಿಸರ ಕಾಳಜಿ ಹೊಂದಿರುವ ಯುವ ಜೋಡಿ ತಮ್ಮ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸೀಡ್ ಪೇಪರ್ ನಲ್ಲಿ ಮುದ್ರಿಸಿ ಹಂಚಿದ್ದಾರೆ.
ಏನಾದರೂ ಡಿಫರೆಂಟ್ ಆಮಂತ್ರಣದ ಬೆನ್ನುಬಿದ್ದ ಜೋಡಿಗೆ ಸೀಡ್ ಪೇಪರ್ ನಲ್ಲಿ ಮಾಡಲಾದ ಈ ಮದುವೆ ಆಮಂತ್ರಣದ ಐಡಿಯಾ ಬಂತು. ಪತ್ರಿಕೆ ಮಣ್ಣಿಗೆ ಎಸೆದು ನೀರು ಚಿಮುಕಿಸಿದರೆ ಅದರಲ್ಲಿನ ಬೀಜಗಳು ಮೊಳಕೆಯೊಡೆಯುತ್ತದೆ. ಈ ಐಡಿಯಾ ಓಕೆ ಮಾಡಿ ಸಾವಿರಕ್ಕೂ ಹೆಚ್ವು ಆಮಂತ್ರಣ ಅಚ್ಚು ಹಾಕಿಸಿದರು.
ಸದ್ಯ ಈ ವಿಭಿನ್ನ ಮದುವೆ ಆಮಂತ್ರಣ ಪತ್ರಿಕೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಕೂಡ ಆಗಿದೆ. ವರನ ತಾಯಿ ಸುಶೀಲಾ ಹಂದೆ ಮಾತನಾಡಿ, ಒಂದು ಆಮಂತ್ರಣಕ್ಕೆ 45 ರೂಪಾಯಿ ಖರ್ಚಾಗಿದೆ. ಆಮಂತ್ರಣ ಪತ್ರಿಕೆ ಕಾರ್ಯಕ್ರಮ ಮುಗಿದ ಮೇಲೆ ಕಸದ ಬುಟ್ಟಿ ಸೇರುತ್ತದೆ. ಹಾಗಾಗಬಾರದೆಂಬ ಉದ್ದೇಶ ಇದರ ಹಿಂದೆ ಇದೆ. ಪರಿಸರ ಕಾಳಜಿ ನಮ್ಮ ಉದ್ದೇಶ ಎಂದರು. ಯುವ ಜೋಡಿ ಪರಿಸರ ಕಾಳಜಿಗೆ ನೆಟ್ಟಿಗರಿಂದ ಶ್ಲಾಘನೆ ವ್ಯಕ್ತವಾಗಿದೆ.
ಫ್ರೆಂಡ್ಸ್ ಮದುವೆ ಆಮಂತ್ರಣ ಪೇಪರ್ ಪೆನ್ ಬಳಸಲಾಗಿದೆ. ಅದರೊಳಗೆ ತರಕಾರಿ, ಹೂವು, ಹಣ್ಣಿನ ಬೀಜ ಅಳವಡಿಸಲಾಗಿದೆ. ಮದುವೆ ನಂತರ ಹೂವು ಕುಂಡದಲ್ಲಿ, ಹಿತ್ತಲಲ್ಲಿ ಹಾಕಿ ನೀರು ಸುರಿದರೆ ಗಿಡಗಳು ನಳನಳಿಸಲಿದೆ.