ಉಡುಪಿ: ಅದಮಾರು ಪರ್ಯಾಯ ಒಂದು ಐತಿಹಾಸಿಕ ಕಾರ್ಯಕ್ರಮ. ಪರ್ಯಾಯದಲ್ಲಿ ಪಾಲ್ಗೊಂಡಿದ್ದು ನನ್ನ ಪುಣ್ಯ ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣಮಠದ ಅದಮಾರು ಪರ್ಯಾಯದ ಸಾರ್ವಜನಿಕ ದರ್ಬಾರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ನನ್ನ ಬಾಲ್ಯದಿಂದ ಕೃಷ್ಣ ಮಠದ ಜೊತೆ ಸಂಪರ್ಕ ಇದೆ. ಪರ್ಯಾಯದಲ್ಲಿ ಪಾಲ್ಗೊಂಡಿದ್ದರಿಂದ ನನಗೆ ವಿಶೇಷ ಆಶೀರ್ವಾದ ಶಕ್ತಿ ಸಿಕ್ಕಿದೆ ಎಂದು ಖುಷಿ ವ್ಯಕ್ತಪಡಿಸಿದರು.
16 ವರ್ಷದ ಹಿಂದೆ ಅದಮಾರು ಪರ್ಯಾಯ ಸಂದರ್ಭ ಉಡುಪಿ ಕೃಷ್ಣಮಠಕ್ಕೆ ಭೇಟಿಕೊಟ್ಟಿದ್ದೆ. ಆಗಿನಿಂದ ನಿರಂತರ ಸಂಪರ್ಕ ಎಂದರು. ಮಾತಿನ ವೇಳೆ ಪೇಜಾವರ ಶ್ರೀಗಳನ್ನು ನೆನಪಿಸಿಕೊಂಡ ನಿರ್ಮಲಾ ಸೀತಾರಾಮನ್, ಅವರ ಭೇಟಿ ಸಾಕಷ್ಟು ಬಾರಿಯಾಗಿದ್ದೇ ಪುಣ್ಯ ಸಂಪಾದನೆಯ ಕೆಲಸ ಎಂದು ಅವರು ಹೇಳಿದರು.
ಮಧ್ವಾಚಾರ್ಯರರು ದೇಶದ ದೊಡ್ಡ ಸಂಪತ್ತು. ಅವರು ಹಾಕಿದ ದಾರಿಯಲ್ಲಿ ನಡೆಯಬೇಕು. ಇದು ಭಾರತದ ಪರಂಪರೆಯ ಸಂಕೇತ. ಪ್ಲಾಸ್ಟಿಕ್ ಮುಕ್ತ ಪರ್ಯಾಯದ ಚಿಂತನೆ ಕೇಳಿ ಆನಂದವಾಯ್ತು. ಸರ್ಕಾರ ಮಾಡುವ ಚಿಂತನೆ ಮಠಗಳು ಮಾಡುತ್ತಿದೆ. ಪ್ಲಾಸ್ಟಿಕ್ ನಿಷೇಧಕ್ಕೆ ಮಠ ನೇತೃತ್ವ ವಹಿಸಿದ್ದು ಈ ಯೋಜನೆ ಬಹಳ ಪರಿಣಾಮಕಾರಿಯಾಗಲಿದೆ ಎಂದರು.