ರಾಮನಗರ: ಜಮ್ಮುವಿನ ಉಧಂಪುರ ಕ್ಯಾಂಪ್ ಬಳಿ ನಡೆದ ಉಗ್ರರ ಗುಂಡಿನ ದಾಳಿಯಲ್ಲಿ ಮಾಗಡಿಯ ವೀರ ಯೋಧ ಹುತಾತ್ಮರಾಗಿದ್ದಾರೆ.
ಮಾಗಡಿ ಪಟ್ಟಣದ ಹೊಂಬಾಳಮ್ಮನಪೇಟೆಯ ಪಾಪಣ್ಣ ಅವರ ಪುತ್ರ ವೆಂಕಟ ನರಸಿಂಹಮೂರ್ತಿ(29) ಉಗ್ರರ ಗುಂಡಿಗೆ ಹುತಾತ್ಮರಾದ ವೀರಯೋಧ. ಸಿಐಎಸ್ಎಫ್ನಲ್ಲಿ ವೆಂಕಟ ನರಸಿಂಹಮೂರ್ತಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಮೃತದೇಹವನ್ನು ಜಮ್ಮುವಿನ ಸರ್ಕಾರಿ ಮೆಡಿಕಲ್ ಕಾಲೇಜಿನ ಆಸ್ಪತ್ರೆಯಲ್ಲಿ ಇರಿಸಲಾಗಿದೆ ಎಂದು ಕುಟುಂಬಗಳಿಂದ ಮಾಹಿತಿ ಲಭ್ಯವಾಗಿದೆ.
ಮಾಗಡಿ ಪೊಲೀಸ್ ಠಾಣೆಗೆ ಈ ಬಗ್ಗೆ ಮಾಹಿತಿ ರವಾನೆಯಾಗಿದ್ದು, ಹೆಚ್ಚಿನ ಮಾಹಿತಿ ಬರಬೇಕಾಗಿದೆ. ಈಗಾಗಲೇ ಪೊಲೀಸರು ವೆಂಕಟ ನರಸಿಂಹಮೂರ್ತಿ ಕುಟುಂಬಸ್ಥರಿಗೆ ವಿಷಯ ಮುಟ್ಟಿಸಲಾಗಿದೆ. ವೀರ ಯೋಧ ಸಾವನ್ನಪ್ಪಿದ ವಿಚಾರ ತಿಳಿದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.
ಯೋಧ ವೆಂಕಟ ನರಸಿಂಹಮೂರ್ತಿ ಅವರ ಪಾರ್ಥೀವ ಶರೀರ ಯಾವಾಗ ಮಾಗಡಿಗೆ ತಲುಪಲಿದೆ ಎಂಬುದರ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಇತ್ತೀಚೆಗಷ್ಟೇ ರಜೆ ಮೇಲೆ ಮಾಗಡಿಗೆ ಬಂದಿದ್ದ ಯೋಧ ವೆಂಕಟ ನರಸಿಂಹಮೂರ್ತಿ ಮರಳಿ ಜಮ್ಮು-ಕಾಶ್ಮೀರ ಗಡಿಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು ಎನ್ನಲಾಗಿದೆ.