ಮುಂಬೈ: ಎನ್ಡಿಎ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರಿಗೆ ಶಿವಸೇನಾ ಬೆಂಬಲ ನೀಡಲಿದೆ ಎಂದು ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಘೋಷಿಸಿದ್ದಾರೆ.
ಬುಡಕಟ್ಟು ಸಮುದಾಯದ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಅಭ್ಯರ್ಥಿಯಾಗಿ ಘೋಷಿಸಲಾಗಿದೆ. ಹೀಗಾಗಿ ಅವರಿಗೆ ಬೆಂಬಲ ನೀಡಬೇಕು ಎಂದು ಶಿವಸೇನಾದ 22 ಸಂಸದ ಪೈಕಿ 16 ಸಂಸದರಿಂದ ಕೇಳಿಬಂದ ಒತ್ತಾಯದ ಮೇರೆಗೆ ಠಾಕ್ರೆ ಈ ಘೋಷಣೆ ಮಾಡಿದ್ದಾರೆ. ಇದನ್ನೂ ಓದಿ: ರಾಷ್ಟ್ರಪತಿ ಚುನಾವಣೆ – ಸಂಸದರ ಬೇಡಿಕೆಗೆ ಮಣಿದ್ರಾ ಉದ್ಧವ್?
ಈ ಕುರಿತು ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, ನನ್ನ ಪಕ್ಷದ ಬುಡಕಟ್ಟು ನಾಯಕರು ಇದೇ ಮೊದಲ ಬಾರಿಗೆ ಬುಡಕಟ್ಟು ಮಹಿಳೆಗೆ ಅಧ್ಯಕ್ಷರಾಗಲು ಅವಕಾಶವಿದೆ ಎಂದು ನನಗೆ ಹೇಳಿದರು. ಬೆಂಬಲ ನೀಡುವ ವಿಚಾರವಾಗಿ ಸೇನಾ ಸಂಸದರ ಸಭೆಯಲ್ಲಿ ಯಾರೂ ನನ್ನ ಮೇಲೆ ಒತ್ತಡ ಹೇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ವಾಸ್ತವವಾಗಿ ಈಗಿನ ರಾಜಕೀಯ ವಾತಾವರಣದ ಪ್ರಕಾರ, ನಾನು ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಬಾರದು. ಆದರೆ ನಾವು ಸಂಕುಚಿತ ಮನೋಭಾವದವರಲ್ಲ ಎಂದು ಪರೋಕ್ಷವಾಗಿ ಬಿಜೆಪಿಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: “ಗಾಂಧಿಯಿಂದ ಗೋಡ್ಸೆಯವರೆಗೆ”..ರಾಷ್ಟ್ರ ಲಾಂಛನಕ್ಕೆ ಅವಮಾನ – ಮೋದಿ ವಿರುದ್ಧ ಕಿಡಿ
ಇದಕ್ಕೂ ಮುಂಚೆ ಮಾತನಾಡಿದ್ದ ಮಾತನಾಡಿದ್ದ ಉದ್ಧವ್ ಠಾಕ್ರೆ ಬಣದ ಸಂಜಯ್ ರಾವುತ್, ದ್ರೌಪದಿ ಮುರ್ಮು ಅವರನ್ನು ಬೆಂಬಲಿಸಿದ ಮಾತ್ರಕ್ಕೆ ಬಿಜೆಪಿ ಬೆಂಬಲಿಸಿದ್ದೇವೆ ಎಂದರ್ಥವಲ್ಲ ಎಂದು ತಿಳಿಸಿದ್ದರು.
ಕಾಂಗ್ರೆಸ್, ಎನ್ಸಿಪಿ ಸೇರಿದಂತೆ ವಿಪಕ್ಷಗಳು ರಾಷ್ಟ್ರಪತಿ ಚುನಾವಣೆಗೆ ಯಶವಂತ್ ಸಿನ್ಹಾ ಅವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿವೆ. ಈ ನಡುವೆ ಕಾಂಗ್ರೆಸ್ ಮತ್ತು ಎನ್ಸಿಪಿಯೊಂದಿಗೆ ಮಹಾಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿ, ಶಿವಸೇನಾದ ಏಕನಾಥ್ ಸಿಂಧೆ ಬಣ ಮತ್ತು ಬಿಜೆಪಿ ಮೈತ್ರಿಯಿಂದ ಅಧಿಕಾರದಿಂದ ಕೆಳಗಿಳಿದ ಉದ್ಧವ್ ಠಾಕ್ರೆ ಅವರು ದ್ರೌಪದಿ ಮುರ್ಮು ಅವರಿಗೆ ಬೆಂಬಲ ಘೋಷಿಸಿದ್ದಾರೆ.