ಜೈಪುರ: ಉದಯಪುರದಲ್ಲಿ ಟೈಲರ್ (Udaipur Tailor) ಕನ್ಹಯ್ಯಾ ಲಾಲ್ (Kanhaiya Lal) ಅವರನ್ನು ಭೀಕರವಾಗಿ ಹತ್ಯೆ ಮಾಡಿದ್ದ ಇಬ್ಬರು ಕೊಲೆಗಡುಕರು ಬಿಜೆಪಿಯೊಂದಿಗೆ (BJP) ನಂಟು ಹೊಂದಿದ್ದಾರೆ ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಆರೋಪಿಸಿದ್ದಾರೆ.
ಭಾನುವಾರ ಜೋಧ್ಪುರದಲ್ಲಿ ಪ್ರಚಾರದ ಜಾಥಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಗೆಹ್ಲೋಟ್, ಉದಯಪುರ ಘಟನೆಗೂ ಕೆಲ ದಿನಗಳ ಮೊದಲು ಬೇರೊಂದು ಪ್ರಕರಣದಲ್ಲಿ ಪೊಲೀಸರು ಇವರಿಬ್ಬರನ್ನು ಬಂಧಿಸಿದ್ದರು. ಅವರನ್ನು ಬಿಡುಗಡೆ ಮಾಡಲು ಬಿಜೆಪಿ ನಾಯಕರು ಪೊಲೀಸ್ ಠಾಣೆಗೆ ಬಂದಿದ್ದರು ಎಂದು ಗೆಹ್ಲೋಟ್ ಗಂಭೀರ ಆರೋಪ ಮಾಡಿದ್ದಾರೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬದಲಿಗೆ ರಾಜಸ್ಥಾನದ ಪೊಲೀಸರ ವಿಶೇಷ ಕಾರ್ಯಾಚರಣೆಯ ತಂಡ (SOG) ಈ ಪ್ರಕರಣವನ್ನು ನಿರ್ವಹಿಸಿದ್ದರೆ ತನಿಖೆ ತಾರ್ಕಿಕವಾಗಿ ಸಾಗುತ್ತಿತ್ತು ಎಂದು ಹೇಳಿದರು. ಇದನ್ನೂ ಓದಿ: ಫೋಟೋ ಶೂಟ್ ವೇಳೆ ಕಿರಿಕ್ – ಯುವಕನ ಇರಿದು ಕೊಂದ ಕಿಡಿಗೇಡಿಗಳು
ಕಳೆದ ವರ್ಷ ಜೂನ್ 28 ರಂದು ಅಮಾನತುಗೊಂಡಿರುವ ಬಿಜೆಪಿ ನಾಯಕಿ ನೂಪುರ್ ಶರ್ಮಾ ಅವರನ್ನು ಬೆಂಬಲಿಸಿ ವಿಷಯವನ್ನು ಪೋಸ್ಟ್ ಮಾಡಿದ್ದಕ್ಕೆ ಕನ್ಹಯ್ಯಾ ಲಾಲ್ ಅವರನ್ನು ಇಬ್ಬರು ದುಷ್ಕರ್ಮಿಗಳು ಹಗಲು ಹೊತ್ತಿನಲ್ಲಿಯೇ ಶಿರಚ್ಛೇದ ಮಾಡಿದ್ದರು. ಮಾತ್ರವಲ್ಲದೇ ಕೃತ್ಯದ ವೀಡಿಯೋವನ್ನು ಕೂಡಾ ಮಾಡಿದ್ದು, ಭಯಾನಕ ವೀಡಿಯೋ ಕಂಡು ದೇಶಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.
ಈ ಪ್ರಕರಣವನ್ನು ಆರಂಭದಲ್ಲಿ ಉದಯಪುರದ ಧನ್ಮಂಡಿ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿತ್ತು. ಆದರೆ ನಂತರ ರಾಷ್ಟ್ರೀಯ ತನಿಖಾ ಸಂಸ್ಥೆ 2022ರ ಜೂನ್ 29 ರಂದು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿತ್ತು.
ಇದೊಂದು ದುರದೃಷ್ಟಕರ ಘಟನೆಯಾಗಿದ್ದು, ನಾನು ಈ ವಿಷಯವನ್ನು ತಿಳಿದ ತಕ್ಷಣ ನಿಗದಿಯಾಗಿದ್ದ ಕಾರ್ಯಕ್ರಮಗಳನ್ನು ರದ್ದುಗೊಳಿಸಿ, ಉದಯಪುರಕ್ಕೆ ಹೊರಟಿದ್ದೆ. ಆದರೆ ಉದಯಪುರ ಘಟನೆಯ ಬಗ್ಗೆ ತಿಳಿದ ನಂತರವೂ ಬಿಜೆಪಿಯ ಹಲವಾರು ಉನ್ನತ ನಾಯಕರು ಹೈದರಾಬಾದ್ನಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು ಎಂದು ಗೆಹ್ಲೋಟ್ ಆರೋಪಿಸಿದ್ದಾರೆ.
ಘಟನೆ ನಡೆದ ದಿನವೇ ಎನ್ಐಎ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ರಾಜ್ಯ ಸರ್ಕಾರ ಇದಕ್ಕೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಐಎ ಏನು ಕ್ರಮ ಕೈಗೊಂಡಿದೆ ಎಂಬುದು ಯಾರಿಗೂ ತಿಳಿದಿಲ್ಲ. ನಮ್ಮ ಎಸ್ಒಜಿ ಪ್ರಕರಣವನ್ನು ಮುಂದುವರಿಸಿದ್ದರೆ ಅಪರಾಧಿಗಳನ್ನು ಇಷ್ಟು ಹೊತ್ತಿಗೆ ನ್ಯಾಯಾಂಗಕ್ಕೆ ತರಲಾಗುತ್ತಿತ್ತು ಎಂದು ಸಿಎಂ ಗೆಹ್ಲೋಟ್ ಹೇಳಿದ್ದಾರೆ. ಇದನ್ನೂ ಓದಿ: ಗುಟುಕು ಮದ್ಯ ಕೊಡಲು ನಿರಾಕರಿಸಿದ್ದಕ್ಕೆ ವೈನ್ ಶಾಪ್ಗೇ ಬೆಂಕಿ ಇಟ್ಟ ಭೂಪ
ಘಟನೆ ಬಳಿಕ ಸಾಮಾಜಿಕ ಜಾಲತಾಣದಲ್ಲಿ ಕೃತ್ಯದ ವೀಡಿಯೋವನ್ನು ಪೋಸ್ಟ್ ಮಾಡಿದ್ದ ಕೊಲೆಗಡುಕರು ತಮ್ಮನ್ನು ತಾವು ರಿಯಾಜ್ ಅಖ್ತರಿ ಮತ್ತು ಘೌಸ್ ಮೊಹಮ್ಮದ್ ಎಂದು ಪರಿಚಯ ಮಾಡಿಕೊಂಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರಿಗೂ ಭೀಕರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದರು. ಇದು ಬೆಳಕಿಗೆ ಬರುತ್ತಲೇ ಕೆಲವೇ ಗಂಟೆಗಳಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು.