ಜೈಪುರ: ಉದಯ್ಪುರದಲ್ಲಿ (Udaipur) ವಿದ್ಯಾರ್ಥಿಯೋರ್ವ ಸಹಪಾಠಿಗೆ ಚಾಕು ಇರಿದ (Stabbing Case) ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ಕು ದಿನಗಳ ಜೀವನ್ಮರಣ ಹೋರಾಟದ ನಂತರ 15 ವರ್ಷದ ಬಾಲಕ ಸೋಮವಾರ ಸಾವನ್ನಪ್ಪಿದ್ದಾನೆ.
ದೇವರಾಜ್ (15) ಮೃತ ಬಾಲಕ. ಕೊನೆಯುಸಿರೆಳೆಯುವ ಸ್ವಲ್ವ ಸಮಯದ ಮೊದಲು ರಕ್ಷಾ ಬಂಧನದ ಪ್ರಯುಕ್ತ ಆತನ ಸಹೋದರಿ ಆತನ ಮಣಿಕಟ್ಟಿಗೆ ರಾಖಿ ಕಟ್ಟಿದ್ದಳು ಎಂದು ಉದಯ್ಪುರ ಕಲೆಕ್ಟರ್ ಅರವಿಂದ್ ಪೋಸ್ವಾಲ್ ಹೇಳಿದ್ದಾರೆ. ಸೋಮವಾರ ಚಿಕಿತ್ಸೆ ವೇಳೆ ಬಾಲಕ ಮೃತಪಟ್ಟಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಶವಾಗಾರಕ್ಕೆ ರವಾನಿಸಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗುವುದು ಎಂದು ಪೊಲೀಸ್ ಮಹಾನಿರೀಕ್ಷಕ (ಉದಯ್ಪುರ) ಅಜಯ್ಪಾಲ್ ಲಂಬಾ ತಿಳಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರು- ಕಾರವಾರ-ಮಂಗಳೂರು ರೈಲು ಸಂಚಾರ ಪುನರಾರಂಭ
ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಜಿಲ್ಲಾ ಆಸ್ಪತ್ರೆಯ ಹೊರಗೆ ಭಾರೀ ಪೊಲೀಸ್ ನಿಯೋಜನೆ ಹಾಗೂ ನಗರದ ವಿವಿಧ ಭಾಗಗಳಲ್ಲಿ ಹೆಚ್ಚುವರಿ ಪಡೆಗಳನ್ನು ನಿಯೋಜಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಚಾಕು ಇರಿತ ಘಟನೆ ಬಳಿಕ ಪೊಲೀಸರು ಆರೋಪಿ ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ – 30 ನಿಮಿಷದ ಮಳೆಗೆ ಕೆರೆಯಂತಾದ ಬೆಂಗಳೂರು
ಘಟನೆಯ ಬಳಿಕ ಉದಯ್ಪುರ ಪ್ರದೇಶದಲ್ಲಿ ಕೋಮುಗಲಭೆ ಉಂಟಾಗಿದ್ದು, ಕೆಲವು ಹಿಂದೂ ಸಂಘಟನೆಯ ಸದಸ್ಯರು ಪಕ್ಕದ ಗ್ಯಾರೇಜ್ನಲ್ಲಿದ್ದ ಕಾರುಗಳಿಗೆ ಬೆಂಕಿ ಹಚ್ಚಿದ್ದಲ್ಲದೇ ಕಲ್ಲು ತೂರಾಟ ಕೂಡ ನಡೆಸಿದ್ದರು. ಶುಕ್ರವಾರ ನಡೆದ ಕೋಮುಗಲಭೆಯ ಹಿನ್ನೆಲೆಯಲ್ಲಿ ನಗರದಲ್ಲಿ ವ್ಯಾಪಕ ಭದ್ರತಾ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: Who Is That Preetham Gowda? ಎಂದ ಹೆಚ್ಡಿಕೆಗೆ ಪ್ರೀತಂ ಗೌಡ ಕೊಟ್ಟ ಉತ್ತರ ಏನು?
ಘಟನೆಯಿಂದ ಉದ್ವಿಗ್ನತೆ ಉಂಟಾಗಿದ್ದರಿಂದ ಮುಂದಿನ ಆದೇಶದವರೆಗೆ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಮೊಬೈಲ್ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಅಲ್ಲದೆ, ನಗರದಲ್ಲಿ ಜನ ಸೇರುವುದನ್ನು ನಿಷೇಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಹೆಂಡತಿಯ ಹತ್ಯೆಗೈದು ಮನೆಯ ಬಾತ್ರೂಂನಲ್ಲಿ ಪೆಟ್ರೋಲ್ ಸುರಿದು ಸುಟ್ಟ ಪತಿ